ಮಂಡ್ಯ: ‘ಶಿಕ್ಷಣ ಮಾಧ್ಯಮವಾಗಲು ಕನ್ನಡ ಭಾಷೆ ಸಮರ್ಥವಾಗಿದೆ, ವಿದ್ಯಾರ್ಥಿಗಳ ಮೇಲೆ ಪರಕೀಯರು ಹೇರಿರುವ ಇಂಗ್ಲಿಷ್ ಹೆಣಬಾರದ ಚಪ್ಪಡಿಯಾಗಿದ್ದು ಅದನ್ನು ಕಿತ್ತೊಗೆಯಬೇಕು ಎಂದು ಕುವೆಂಪು ಅವರು ಕರೆ ನೀಡಿದ್ದರು’ ಎಂದು ಸಾಹಿತಿ ಆಶಾ ರಘು ಹೇಳಿದರು.
ನಗರದ ಸಂತ ಜೋಸೆಫರ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಸಾಪ 109ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.,
‘ಕರ್ನಾಟಕದಲ್ಲಿ ಕನ್ನಡ ಪ್ರಥಮ ಭಾಷೆ ಆಗದಿದ್ದರೆ ಕನ್ನಡಿಗರ ಏಳ್ಗೆಗೆ ಧಕ್ಕೆ ಬರುತ್ತದೆ. ರಾಜ್ಯದ ರಚನೆಯ ಅರ್ಥ ಶೂನ್ಯವಾಗುತ್ತದೆ ಎಂಬ ಕುವೆಂಪು ಮಾತನ್ನು ಮತ್ತೆ ಮತ್ತೆ ನೆನೆಪು ಮಾಡಿಕೊಳ್ಳಬೇಕು. ಕನ್ನಡ ಭಾಷೆಯು ಶಿಕ್ಷಣದ ಮಾಧ್ಯಮವಾಗಬೇಕು, ರಾಜ್ಯದಲ್ಲಿ ಕನ್ನಡ ಉಳಿಯಬೇಕು ಮತ್ತು ಬೆಳೆಯಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ’ ಎಂದರು.
‘ಕನ್ನಡ ಭಾಷೆ ಪುರಾತನ ಭಾಷೆಯಾಗಿದ್ದು, ತನ್ನದೇ ಆದ ವೈಶಿಷ್ಟ್ಯಹಾಗೂ ವಿಶೇಷಣಗಳನ್ನು ಹೊಂದಿದೆ. ಇಂದಿಗೂ ತನ್ನತನವನ್ನು ಉಳಿಸಿಕೊಂಡು, ಹೆಮ್ಮರವಾಗಿ ಬೆಳೆಯುತ್ತಿದೆ. ಸರ್ಕಾರಗಳು ಇಚ್ಛಾಸಕ್ತಿಯಿಂದ ಕನ್ನಡವನ್ನು ಆಡಳಿತ ಭಾಷೆಯಾಗಿ ಸಂಪೂರ್ಣವಾಗಿ ಜಾರಿಗೊಳಿಸಬೇಕು’ ಎಂದು ಕರೆ ನೀಡಿದರು.
ಸಾಹಿತಿ ಡಾ.ಪ್ರದೀಪ್ಕುಮಾರ್ ಹೆಬ್ರಿ ಮಾತನಾಡಿ, ‘ಕನ್ನಡ ಪ್ರೀತಿಯನ್ನು ಎಷ್ಟು ಅಪ್ಪಿಕೊಳ್ಳುತ್ತೇವೆಯೋ ಅಷ್ಟು ಸಮಾಜ ಒಪ್ಪಿಕೊಳ್ಳುತ್ತದೆ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಸಾಪದಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯ ಆಸಕ್ತಿ ಬೆಳೆಸುತ್ತಿರುವುದು ಶ್ಲಾಘನೀಯವಾಗಿದೆ. ಪೋಷಕರಾದವರು ಮಕ್ಕಳ ಸಾಹಿತ್ಯ ಅಭಿರುಚಿ ಗುರುತಿಸುವ ಕೆಲಸ ಮೊದಲು ಆಗಬೇಕು’ ಎಂದು ಸಲಹೆ ನೀಡಿದರು.
‘ಸವಾಲುಗಳನ್ನು ಎದರಿಸಿದರೆ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ಕ್ರಿಯಾಚಟುವಟಿಕೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮನ್ನು ಆರಾಧಿಸುವಂತಹ ಸೇವೆ ಸಮಾಜದಲ್ಲಿರಬೇಕು. ಇದು ಸವಾಲು ರೀತಿಯಲ್ಲಿ ತೆಗೆದುಕೊಳ್ಳಬೇಕು. ಪರಿಷತ್ಗೆ ಸದಸ್ಯತ್ವ ತೆಗೆದುಕೊಂಡು ಸಾಹಿತ್ಯ ಆಸಕ್ತಿ ಬೆಳೆಸಿಕೊಳ್ಳಲು ಸಹಾಯ ಮಾಡಬೇಕು’ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಮಾತನಾಡಿದರು. ಕರ್ನಾಟಕ ರಾಜ್ಯ ಉಗ್ರಾಣ ನಿಗಮ ನೌಕರರ ಸಂಘದ ಅಧ್ಯಕ್ಷ ಡಾ.ಎಚ್.ಎಸ್.ಲಕ್ಷ್ಮಿಗೌಡ, ಸಾಹಿತಿ ಡಾ.ಪ್ರದೀಪ್ಕುಮಾರ ಹೆಬ್ರಿ. ಆಶಾ ರಘು ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂತ ಜೋಸೆಫೆರಾ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕಿ ಸಿಸ್ಟರ್ ಫ್ರಿಡೋಲಿನ್, ಪ್ರಾಂಶುಪಾಲ ಡಾ.ಎನ್.ಜಯಶಂಕರ್, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ಬಿ.ರಮೇಶ್, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.