ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್ಎಸ್ನ ಬೃಂದಾವನದಲ್ಲಿ ಬುಧವಾರ ರಾತ್ರಿ ಚಿರತೆ ಕಾಣಿಸಿಕೊಂಡಿದೆ.
ಬೃಂದಾವನದ ದಕ್ಷಿಣ ದ್ವಾರದ ಬಳಿ ಈ ಚಿರತೆ ಹಾದು ಹೋಗಿದೆ. ಚಿರತೆ ಹಾದು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯ ವ್ಯಾಪಾರಿಗಳು ಹಾಗೂ ನೌಕರರಲ್ಲಿ ಆತಂಕ ಮೂಡಿಸಿದೆ. ಚಿರತೆ ಕಾಣಿಸಿಕೊಂಡಿರುವ ಸಂಗತಿಯನ್ನು ಪೊಲೀಸರು ಸ್ಥಳೀಯ ಗ್ರಾಮ ಪಂಚಾಯಿತಿಗೆ ತಿಳಿಸಿದ್ದಾರೆ.
ಗ್ರಾ.ಪಂ.ಪಿಡಿಒ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಹೆಜ್ಜೆ ಗುರುತು ಪತ್ತೆಯಾದರೆ ಬೋನು ಇರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸುನೀತಾ ತಿಳಿಸಿದ್ದಾರೆ.
ತಾಲ್ಲೂಕಿನ ಮಹದೇವಪುರ, ನೇರಲಕೆರೆ, ಹೆಬ್ಬಾಡಿ ಗ್ರಾಮಗಳ ಆಸುಪಾಸಿನಲ್ಲಿ 15 ದಿನಗಳ ಈಚೆಗೆ ಚಿರತೆಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿವೆ. ಸದ್ಯ ಮಹ ದೇವಪುರ ಮತ್ತು ನೇರಲಕೆರೆ ಗ್ರಾಮಗಳ ಬಳಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ ಎಂದು ಸುನೀತಾ ಹೇಳಿದ್ದಾರೆ.