ಮದ್ದೂರು: ‘ಸಮಾಜದಲ್ಲಿ ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಹಾಗೂ ಶೋಷಣೆ ಕೊನೆಗೊಳ್ಳಬೇಕು’ ಎಂದು ಪತ್ರಕರ್ತೆ ಡಾ.ವಿಜಯಾ ತಿಳಿಸಿದರು.
ತಾಲ್ಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ. ವಿದ್ಯಾಸಂಸ್ಥೆ ಆವರಣದಲ್ಲಿ ಆರ್.ಕೆ. ಶಿಕ್ಷಣ ಸಂಸ್ಥೆ, ಕರ್ನಾಟಕ ಸಂಘ ಹಾಗೂ ಪ್ರಗತಿಪರ ಮಹಿಳಾ ಸಂಘಟನೆ ಯಿಂದ ಮಂಗಳವಾರ ಆಯೋಜಿಸಿದ್ದ ‘ರಾಜ್ಯ ಮಟ್ಟದ ಮಹಿಳಾ ಸಮಾವೇಶ ಹಾಗೂ ಇಂದಿನ ಲಿಂಗತ್ವ ಸಮಾನತೆ, ನಾಳಿನ ಸುಸ್ಥಿರತೆ ವಿಚಾರಗೋಷ್ಠಿ’ಯನ್ನು ಉದ್ಘಾಟಿಸಿ ಮಾತನಾಡಿದರು.
‘ಲೋಕಕ್ಕೆ ಹೆಣ್ಣಿನ ಅಗತ್ಯವಿದೆ. ಆದರೆ, ಹೆಣ್ಣಿಗೆ ಲೋಕದ ಅಗತ್ಯವಿಲ್ಲ. ಲಿಂಗತ್ವ ಅಸಮಾನತೆ ದೂರವಾಗಬೇಕು’ ಎಂದರು.
‘ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಅಂಧಕಾರವನ್ನು ಹೆಣ್ಣಿನ ಮೇಲೆ ಬಲವಂತವಾಗಿ ಹೇರುವುದು ಸರಿಯಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳಲು ಹೆಣ್ಣು ಸರ್ವ ಸ್ವತಂತ್ರಳು. ಹೆಣ್ಣು ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಿದೆ. ಮೌಢ್ಯದ ಹೆಸರಿನಲ್ಲಿ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ. ಇದನ್ನು ಕಿತ್ತೆಸೆಯಬೇಕು’ ಎಂದರು.
‘ಹೆಣ್ಣಿನ ಮೇಲೆ ದೌರ್ಜನ್ಯ ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ, ಆ ರೀತಿ ಆಗುತ್ತಿಲ್ಲ. ಹೆಣ್ಣಿನ ಮೇಲೆ ಅತ್ಯಾಚಾರ ಎಸಗಿದವರು ಜಾಮೀನಿನ ಮೇಲೆ ಹೊರ ಬಂದು ಆರಾಮಾಗಿ ರುತ್ತಾರೆ. ಆದರೆ, ಅತ್ಯಾಚಾರಕ್ಕೊಳಗಾದ ಹೆಣ್ಣು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಾಳೆ’ ಎಂದರು.
ಸ್ತ್ರೀರೋಗ ತಜ್ಞೆ ಡಾ. ಶಾಲಿನಿ ಸುಹಾಸ್ ಮಾತನಾಡಿ, ‘ಹೆಣ್ಣು ಭ್ರೂಣ ಹತ್ಯೆಗೆ ಮಹಿಳೆಯರೇ ಮುಂದಾ ಗುತ್ತಿರುವುದು ವಿಪರ್ಯಾಸದ ಸಂಗತಿ. ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಬೇಕು’ ಎಂದರು.
ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಯಧುಶೈಲ ಸಂಪತ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಗಣ್ಯರನ್ನು ಪೂರ್ಣಕುಂಭ, ಸಾಂಸ್ಕೃತಿಕ ಕಲಾತಂಡಗಳೊಂದಿಗೆ ವೇದಿಕೆಗೆ ಕರೆತರಲಾಯಿತು.
ಆರ್.ಕೆ. ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ. ಚಂದ್ರಕಲಾ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಶರೀಫಾ ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಮರ್ಥನಾ ವೇದಿಕೆ ಅಧ್ಯಕ್ಷೆ ನಾಗರೇವಕ್ಕ, ಮಂಡ್ಯ ನಗರಸಭಾ ಸದಸ್ಯೆ ಮಂಜುಳಾ ಉದಯಶಂಕರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಪ್ರಾಧ್ಯಾಪಕಿಯರಾದ ಕೆಂಪಮ್ಮ, ಕನ್ನಡ ಸಹಪ್ರಾಧ್ಯಾಪಕಿ ಲತಾ ಮೈಸೂರು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ವಿಮಲಾ, ನಿವೃತ್ತ ಪ್ರಾಧ್ಯಾಪಕಿ ಗೀತಾಕುಮಾರಿ, ರಾಜ್ಯ ರೈತ ಸಂಘದ ಮುಖಂಡರಾದ ನಂದಿನಿ ಜಯರಾಮು, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ನಿರ್ದೇಶಕಿ ಪ್ರಭಾ ಸುರೇಶ್, ಕೀರ್ತನಾ ರಾಮಕೃಷ್ಣ, ಕಾವ್ಯಾ, ಮಲ್ಲಿಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.