ಮಂಡ್ಯ: ಬೆಂಗಳೂರಿನಲ್ಲಿ ಲಾಕ್ಡೌನ್ ಘೋಷಣೆಯಾಗಿರುವ ಕಾರಣ ಜಿಲ್ಲೆಯ ಹೆಚ್ಚಿನ ವಲಸಿಗರು ತವರಿಗೆ ಮರಳುತ್ತಿದ್ದಾರೆ. ತಾಲ್ಲೂಕಿನ ಕಿರಗಂದೂರು ಗ್ರಾಮದ ಇಬ್ಬರು ಅಳಿಯಂದಿರು ಕುಟುಂಬ ಸಮೇತ ಮಾವನ ಹೊಲದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ.
ಮದ್ದೂರು ತಾಲ್ಲೂಕು ಕರ್ಕಳ್ಳಿ ಗ್ರಾಮದ ಸ್ವಾಮಿ ಅವರು ಕಿರಗಂದೂರು ಗ್ರಾಮದ ಸಂಧ್ಯಾರಾಣಿ ಅವರನ್ನು ವಿವಾಹವಾಗಿದ್ದಾರೆ. ಕೆಂಗೇರಿಯ ಶ್ರೀರಾಮ್ ಅವರು ಸಂಧ್ಯಾರಾಣಿ ಸಹೋದರಿ ಶೋಭಾರಾಣಿ ಅವರನ್ನು ಮದುವೆಯಾಗಿದ್ದಾರೆ. ಸ್ವಾಮಿ ಬೆಂಗಳೂರಿನಲ್ಲಿ ಆಟೊ ಓಡಿಸುತ್ತಿದ್ದರೆ, ಶ್ರೀರಾಮ್ ಟ್ಯಾಕ್ಸಿ ಓಡಿಸುತ್ತಿದ್ದರು.
ಬೆಂಗಳೂರಿನಲ್ಲಿ ಲಾಕ್ಡೌನ್ ಜಾರಿಗೊಳಿಸಿರುವ ಕಾರಣ ಎರಡೂ ಕುಟುಂಬ ಸದಸ್ಯರು ಮಕ್ಕಳೊಂದಿಗೆ ಬಂದು ಜುಲೈ 12 ರಿಂದ ಹೊಲದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಸೀಮೆಎಣ್ಣೆ ಸ್ವೌ ಇಟ್ಟುಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ಧಾರೆ.
‘ನಾವು ಬೆಂಗಳೂರಿನಿಂದ ಬಂದಿರುವ ಕಾರಣ ಜನರು ಅನುಮಾನದಿಂದ ನೋಡುತ್ತಾರೆ. ಯಾರಿಗೂ ತೊಂದರೆ ಕೊಡುವುದು ಬೇಡ ಎಂಬ ಕಾರಣಕ್ಕೆ ಮಾವನ ಹೊಲದಲ್ಲೇ ವಾಸ ಮಾಡುತ್ತಿದ್ದೇವೆ. 15 ದಿನ ಇಲ್ಲೇ ಇದ್ದು ಮನೆಗೆ ತೆರಳುತ್ತೇವೆ. ಕಳೆದ ಮೂರು ತಿಂಗಳಿಂದ ಮನೆಯ ಒಳಗೇ ಇದ್ದು ತುಂಬಾ ಬೇಸರವಾಗಿತ್ತು. ಈಗ ಸುಂದರ ಪರಿಸರದಲ್ಲಿ ವಾಸ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಸ್ವಾಮಿ ಹೇಳಿದರು.