ಕೊಪ್ಪ: ರೇಷ್ಮೆ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟವಾದ ಕಾರಣ ಇಲ್ಲಿಯ ರೈತರೊಬ್ಬರು ಮನನೊಂದು ಗುರುವಾರ 1 ಎಕರೆಯಲ್ಲಿ ಬೆಳೆದಿದ್ದ ರೇಷ್ಮೆ ಬೆಳೆಯನ್ನು ಟ್ರಾಕ್ಟರ್ನಲ್ಲಿ ಉಳುಮೆ ಮಾಡಿ ನಾಶಪಡಿಸಿದ್ದಾರೆ.
ಸಮೀಪದ ಹರಳಕೆರೆ ಗ್ರಾಮದ ರೈತ ಗಿರೀಶ್ ರೇಷ್ಮೆ ನಾಶ ಮಾಡಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮೂರು ವರ್ಷಗಳ ಹಿಂದೆ ಕೆ.ಜಿ ರೇಷ್ಮೆಗೆ ಸರ್ಕಾರ ₹ 40 ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಈಗ ಅದನ್ನು ನಿಲ್ಲಿಸಲಾಗಿದೆ. ರೆಷ್ಮೆ ಬೆಳೆಯಿಂದ ಲಾಭಕ್ಕಿಂತ ಖರ್ಚು ಜಾಸ್ತಿಯಾಗಿದೆ. ಹೀಗಾಗಿ ಬೆಳೆ ನಾಶ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
‘₹ 3 ಲಕ್ಷ ಸಾಲ ಮಾಡಿ ರೇಷ್ಮೆ ಬೇಸಾಯ ಮಾಡಿದ್ದೆ, ಹುಳುವಿನ ಮನೆ ನಿರ್ಮಾಣ ಮಾಡಿ, ಕೊಳವೆ ಬಾವಿ ಕೊರೆಸಿದ್ದೆ. ಹಾಕಿದ್ದ ಹಣವೂ ಬಾರದೆ ನಷ್ಟವಾಗಿದ್ದು ರೇಷ್ಮೆ ಬೆಳೆ ನಿರ್ವಹಣೆ ಮಾಡಲು ಸಾಧ್ಯವಾಗದೇ ನೋವಿನಿಂದ ಬೆಳೆ ನಾಶ ಮಾಡಿದ್ದೇನೆ’ ಎಂದು ರೈತ ಗಿರೀಶ್ ತಿಳಿಸಿದರು.