ಮದ್ದೂರು: ತಾಲ್ಲೂಕಿನ ಕೆ.ಕೊಡಿಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಬನ್ನೂರು ಹೇಮಾದ್ರಮ್ಮ ಮತ್ತು ಸಾಕದೇವಮ್ಮ ಹಾಗೂ ಸುಬ್ರಮಣ್ಯ (ನಾಗದೇವತೆ) ದೇವಸ್ಥಾನ ಹಾಗೂ ಮಹಾದ್ವಾರದ ಪ್ರತಿಷ್ಠಾಪನಾ ಮಹೋತ್ಸವ ಭಾನುವಾರ ನೆರವೇರಿತು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರತಿಯೊಬ್ಬರು ಭಗವಂತನನ್ನು ಆರಾಧಿಸಿ ಪೂಜಿಸಬೇಕು. ದೇವರ ಆರಾಧನೆಯಿಂದ ಮಾನವನ ಜೀವನಕ್ಕೆ ಮುಕ್ತಿ ದೊರೆಯಲಿದೆ. ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಸುಖ, ಶಾಂತಿ ನೆಲೆಸಲು ದೇವರ ಅನುಗ್ರಹ ಅಗತ್ಯ ಎಂದು ಅವರು ತಿಳಿಸಿದರು.
ಮಹೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ 10.30ರಿಂದ ಅಗ್ರ ತೀರ್ಥ ಸಂಗ್ರಹ, ಶೀಲಾಮೂರ್ತಿಗಳ ಗ್ರಾಮ ಪ್ರದಕ್ಷಿಣೆ ಮತ್ತು ಯಾಗಶಾಲಾ ಪ್ರವೇಶ ಮೊದಲಾದ ಧಾರ್ಮಿಕ ವಿಧಿ, ವಿಧಾನಗಳು ನಡೆದವು.
ಬ್ರಾಹ್ಮಿ ಮುಹೂರ್ತದ ಧನಸ್ಸು ಲಗ್ನದಲ್ಲಿ ಬೆಳಿಗ್ಗೆ 9 ಗಂಟೆಗೆ ಕುಂಭಾಬಿಷೇಕ ನಯನೋನ್ಮಿಲನ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಹೋತ್ಸವ ಕಾರ್ಯಕ್ರಮಕ್ಕೆ ಕೆ.ಕೋಡಿಹಳ್ಳಿ, ಅಗರಲಿಂಗನ ದೊಡ್ಡಿ, ಸೋಮನಹಳ್ಳಿ, ಹುಣಸೆಮರದದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಬಂದಿದ್ದರು.