ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಗ್ರಾಮದ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಇಬ್ಬರು ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ.
ಬೆಳಗೊಳ ಗ್ರಾಮದ ಬಲಮರಿ ರಸ್ತೆಯ ನಿವಾಸಿ ವಾಸಿಂ ಖಾನ್ ಬಂಧಿತ ಆರೋಪಿ.
ಕೆಆರ್ಎಸ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗಳಾದ ಮಂಜುನಾಥ್ ಮತ್ತು ತೌಸಿಫ್ ಅವರ ಮೇಲೆ ಹಲ್ಲೆ ನಡೆದಿದ್ದು, ಇಬ್ಬರಿಗೂ ಗಾಯಗಳಾಗಿವೆ. ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ನಡೆಸಿದ ಆರೋಪದಡಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
‘ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಬಗ್ಗೆ ಬಂದ ದೂರು ಆಧರಿಸಿ ವಾಸಿಂಖಾನ್ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ವಾಸಿಂಖಾನ್ ಏಕಾಏಕಿ ಹಲ್ಲೆ ಮಾಡಿದ’ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ. ಕೆಆರ್ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಕೆಗಳ ಕಳ್ಳತನ
ಕೊಪ್ಪ: ಸಮೀಪದ ಕೀಳಘಟ್ಟ ಗ್ರಾಮದಲ್ಲಿಸೋಮವಾರ ರಾತ್ರಿ ಮನೆಗಳಿಗೆ ಬೀಗ ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಮೇಕೆಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಗ್ರಾಮದ ಲಿಂಗಪ್ಪ ಅವರ ಪುತ್ರ ಕುಮಾರ್ ಅವರಿಗೆ ಸೇರಿದ ಮೇಕೆಗಳು ಕಳುವಾಗಿವೆ.
ಈಚೆಗೆ ಗ್ರಾಮೀಣ ಭಾಗಗಳಲ್ಲಿ ಕುರಿ, ಮೇಕೆಗಳು ಮತ್ತು ಸರ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಈ ಸಂಬಂಧ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.