ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಇ–ಆಫೀಸ್‌ ತಂತ್ರಾಂಶ ಅಳವಡಿಕೆಯಲ್ಲಿ ಹಿಂದುಳಿದ ಜಿಲ್ಲೆ

ತಾಲ್ಲೂಕು ಹಂತದ ಕಚೇರಿಗಳಿಗೆ ಇನ್ನೂ ಬಾರದ ಸಾಫ್ಟ್‌ವೇರ್‌, ಯೋಜನೆ ಜಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ
Last Updated 29 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಮಂಡ್ಯ: ಪಾರದರ್ಶಕ, ಕಾಗದ ರಹಿತ ಆಡಳಿತ, ಕಡತ ನಿರ್ವಹಣೆ, ತ್ವರಿತ ಗತಿ ವಿಲೇವಾರಿ, ಕಡತ ಕಣ್ಮರೆ ತಡೆ, ತಿದ್ದುಪಡಿ ಸಮಸ್ಯೆ ಇತರ ಉದ್ದೇಶಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಇ–ಆಫೀಸ್‌ ತಂತ್ರಾಂಶ ಬಳಕೆಯಲ್ಲಿ ಜಿಲ್ಲೆ ಕುಂಟುತ್ತಾ ಸಾಗಿದೆ. ಇದರಿಂದ ಸರ್ಕಾರದ ಮಹತ್ತರ ಯೋಜನೆಗಳ ಲಾಭ ಜನರಿಗೆ ಸಿಗದಂತಾಗಿದೆ.

ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಈಗಾಗಲೇ ಇ–ಆಫೀಸ್‌ ತಂತ್ರಾಶದ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ತಾಲ್ಲೂಕು ಮಟ್ಟದ ಕಚೇರಿಗಳಲ್ಲೂ ಅಳವಡಿಸಲಾಗುತ್ತಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ತಂತ್ರಾಂಶ ಅಳವಡಿಕೆಯಲ್ಲೇ ತಡವಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗಷ್ಟೇ ಇ–ಆಫೀಸ್‌ ತಂತ್ರಾಂಶ ಅಳವಡಿಸಿರುವುದೇ ಇದಕ್ಕೆ ಉದಾಹರಣೆ. ಹಲವು ಜಿಲ್ಲಾ ಮಟ್ಟದ ಕಚೇರಿಗಳಲ್ಲೇ ಇನ್ನೂ ಅಳವಡಿಕೆಯಾಗಿಲ್ಲ, ಇನ್ನು ಕಾರಣ ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಅಳವಡಿಸುವ ಮಾತು ದೂರವೇ ಉಳಿದಿದೆ.

ಸದ್ಯ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ತಂತ್ರಾಂಶ ಅಳವಡಿಕೆಯಾಗಿದ್ದು ಆ ಮೂಲಕವೇ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಕಚೇರಿಗೆ ಬರುವ ಎಲ್ಲಾ ಕಾಗದ ಪತ್ರಗಳನ್ನು ಆರಂಭದಲ್ಲಿ ಸ್ಕ್ಯಾನ್‌ ಮಾಡಿ ಇ–ಆಫೀಸ್‌ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಬೇಕು. ನಂತರ ಸ್ಕ್ಯಾನ್‌ ಆದ ಪ್ರತಿಗಳು ಮುಂದಿನ ರವಾನೆಯಾಗುತ್ತದೆ. ಪ್ರಸ್ತುತ ಕಡತ ಯಾರ ಬಳಿ, ಯಾವ ಹಂತದಲ್ಲಿವೆ, ಎಷ್ಟು ದಿನಗಳಿಂದ ಉಳಿದಿವೆ ಮುಂತಾದ ಮಾಹಿತಿಯನ್ನು ಕುಳಿತಲ್ಲಿಯೇ ನೋಡಬಹುದು. ಇದರಿಂದ ಮೇಲಧಿಕಾರಿಗಳು ಸಂಬಂಧಪಟ್ಟವರಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಕುಳಿತಲ್ಲಿಯೇ ಮಾಡಲು ಸಹಾಯಕವಾಗುತ್ತದೆ.

ಈ ಮೊದಲು ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರ ಹಿಡಿದು ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಒಮ್ಮೊಮ್ಮೊ ಕಡತ ನಾಪತ್ತೆ ಆಗಿ ವರ್ಷಗಳೇ ಕಳೆದರೂ ಸಿಗದ ಹಲವು ಉದಾಹರಣೆಗಳಿವೆ. ಈ ಸಮಸ್ಯೆ ದೂರಮಾಡಲು ತಂತ್ರಾಂಶ ಅಳವಡಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿಯಾಗದ ಕಾರಣ ಸಾರ್ವಜನಿಕ ಸ್ನೇಹಿ ಆಡಳಿತ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ.

‘ಈ ಮೊದಲು ವರದಿ ತಯಾರಿಸಿ ಕಳುಹಿಸಿದ್ದನ್ನು ಬದಲಾಯಿಸುವ ಸಾಧ್ಯತೆ ಇತ್ತು. ಆದರೆ ಇ–ಆಫೀಸ್‌ ಮೂಲಕ ಕಡತ ಪರಿಶೀಲಿಸಿ ಮೇಲಾಧಿಕಾರಿಗೆ ವರ್ಗಾಯಿಸಿದರೆ ಮತ್ತೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ತಂತ್ರಾಂಶವನ್ನು ಎಲ್ಲಾ ಹಂತದ ಕಚೇರಿಗಳಲ್ಲೂ ಅಳವಡಿಸಿದರೆ ಕಡತಗಳ ಕಣ್ಮರೆ, ತಿದ್ದುಪಡಿ, ಅಡಕ ಕಾಣೆಯಾಗುವ ಸಮಸ್ಯೆ ಇರುವುದಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಅ.1ರಿಂದ ಜಿಲ್ಲಾ ಪಂಚಾಯಿತಿ ಅನುಷ್ಠಾನಗೊಳಿಸಲಾಗಿದೆ. ಮುಂದೆ ತಾಲ್ಲೂಕು ಪಂಚಾಯಿತಿ ಕಚೇರಿಗಳಲ್ಲಿ ಅಳವಡಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಇ–ಆಫೀಸ್‌ ನೋಡೆಲ್‌ ಅಧಿಕಾರಿ ಎನ್‌.ಡಿ.ಪ್ರಕಾಶ್‌ ಹೇಳಿದರು.

ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಇ–ಆಫೀಸ್‌ ಯೋಜನೆ ಅಳವಡಿಕೆ ಸುಲಭದ ಮಾತಲ್ಲ. ಈಗಾಗಲೇ ಬೇರೆಬೇರೆ ತಂತ್ರಾಂಶ ಅಳವಡಿಕೆಯಲ್ಲಿ ಸಾಕಷ್ಟು ತಾಂತ್ರಿಕೆ ಸಮಸ್ಯೆಯಾಗಿದೆ. ಸರ್ವರ್‌ ಸಮಸ್ಯೆ, ಸಿಬ್ಬಂದಿ ಕೊರತೆ ಕಾರಣದಿಂದ ತಂತ್ರಾಂಶ ಉಪಯೋಗವಾಗುವಾಗುತ್ತಿಲ್ಲ. ಇ–ಆಫೀಸ್‌ ತಂತ್ರಾಂಶ ಕೂಡ ಅದೇ ಹಾದಿ ಹಿಡಿಯುವ ಸಮಸ್ಯೆ ಇದೆ ಎಂದು ಕೆಲವು ಸಿಬ್ಬಂದಿ ಹೇಳಿದರು.

********

ಜ.1ರಿಂದ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯ
ರಾಜ್ಯದಾದ್ಯಾಂತ ಜ.1ರಿಂದ 2020ರಿಂದ ಎಲ್ಲಾ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಕಡತಗಳನ್ನು ಇ–ಕಚೇರಿ ತಂತ್ರಾಂಶದಲ್ಲೇ ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ರವೀಂದ್ರ ಆ. 16ರಂದು ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್‌ ಕಚೇರಿ, ಎಸ್‌ಪಿ ಕಚೇರಿಯಲ್ಲಿ ಮಾತ್ರ ಇ–ಆಫೀಸ್‌ ಅನುಷ್ಠಾನಗೊಂಡಿದೆ. ಜ.1ರೊಳಗೆ ಉಳಿದ ಕಚೇರಿಗಳಲ್ಲೂ ಅನುಷ್ಟಾನ ಮಾಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

**********

ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಅರ್ಜಿಗಳನ್ನು ಇ–ಆಫೀಸ್‌ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಸಿಬ್ಬಂದಿಗೆ ತರಬೇತಿ ನೀಡಿ ತಾಲ್ಲೂಕು ಕಚೇರಿಗಳಲ್ಲೂ ಆರಂಭಿಸಲಾಗುವುದು
–ಟಿ.ಯೋಗೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT