ಮಂಡ್ಯ: ‘ಬಹುಜನ ಸಮಾಜ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು’ಎಂದು ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.
ನಗರದ ಲಾವಣ್ಯ ಪ್ಲಾಜಾ ಸಭಾಂಗಣದಲ್ಲಿ ನಡೆದ ಬಿಎಸ್ಪಿ ಜಿಲ್ಲಾ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮನುವಾದಿಗಳ ನಡುವೆ ಬಹುಜನರಾದ ನಾವು ಆಳುವ ಸರ್ಕಾರವಾಗಬೇಕಾದರೆ, ಪ್ರತಿಯೊಬ್ಬರೂ ನಮ್ಮ ಪಕ್ಷ ಕಟ್ಟುವ ಸಾಮರ್ಥ್ಯವನ್ನು ತೋರಿಸಬೇಕಿದೆ. ಬಹುಜನ ಚಳುವಳಿಯನ್ನು ಗ್ರಾಮೀಣ ಭಾಗದ ಬಹುಜನರಿಗೆ ತಲುಪಿಸುವ ಕೆಲಸ ಮಾಡಿ, ಚುನಾವಣೆಯಲ್ಲಿ ಫಲಿತಾಂಶ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ಎಂದರು.
‘ಪಕ್ಷ ಅಧಿಕಾರ ಹಿಡಿಯಬೇಕಾದರೆ ಬೂತ್ ಮಟ್ಟದಲ್ಲಿ ಅತೀ ಹೆಚ್ಚು ಸಮಯ ತೊಡಗಿಸಿಕೊಂಡು ಜನರ ಸಮಸ್ಯೆಗಳನ್ನು ಗುರುತಿಸಬೇಕು. ಪಕ್ಷ ಕೇವಲ ಎಸ್ಸಿ, ಎಸ್ಟಿ ಪಕ್ಷವಾಗದೇ, ಗುಂಪು ಗುಂಪಾಗಿ ಪಕ್ಷಕ್ಕೆ ಇತರೆ ಸಮುದಾಯದ ಜನರನ್ನು ಕರೆತರುವ ಕೆಲಸ ಮಾಡಬೇಕಿದೆ’ ಎಂದರು.
‘ಇಡೀ ದೇಶದಲ್ಲಿ ಭೂಮಿ ಇಲ್ಲದ ನಿರ್ಗತಿಕರಿಗೆ ಭೂಮಿ ಹಂಚಿದ, ಹಿಂದುಳಿದ ಜಾತಿಗಳಿಗೆ ಬ್ಯಾಕ್ ಲಾಗ್ ಹುದ್ದೆ ತುಂಬಿದ, ನಿರ್ಗತಿಕರಿಗೆ ವಸತಿ ಕಲ್ಪಿಸುವ ಜೊತೆಗೆ ಲಕ್ಷಾಂತರ ಪೌರ ಕಾರ್ಮಿಕರ ನೌಕರಿಯನ್ನು ಕಾಯಂ ಮಾಡಿದ ಬಿಎಸ್ಪಿ ನಾಯಕಿ ಅಕ್ಕ ಮಾಯಾವತಿ ಅವರು ಮಾದರಿಯಾಗಬೇಕು’ಎಂದರು.