ಮಂಡ್ಯ: ಕುತೂಹಲದ ಕೇಂದ್ರ ಬಿಂದುವಾಗಿದ್ದ ಮಂಡ್ಯ ಲೋಕಸಭೆ ಕ್ಷೇತ್ರವು ಮತದಾನದ ದಿನವೂ ಹಲವು ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಒಬ್ಬರು ಮತ ಹಾಕಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮತ್ತೊಬ್ಬರು ಮತಹಾಕಿ ಮೃತಪಟ್ಟರು. ಮಹಿಳೆಯೊಬ್ಬರು ಪತಿಯ ಮೃತದೇಹಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿ ಹಕ್ಕು ಚಲಾಯಿಸಿದರು.
ಹಿರೇಮರಳಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಗಳಾ ನವೀನ್ ಮತ ಚಲಾಯಿಸಿದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬೆಳಿಗ್ಗೆ ಮತದಾನ ಮಾಡಿ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರು. ಮಧ್ಯಾಹ್ನ 1.30ಕ್ಕೆ ಹೆರಿಗೆ ಆಯಿತು.
ಪತಿ ಅಂತ್ಯಕ್ರಿಯೆ ನಂತರ ಮತದಾನ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ನಿವಾಸಿ ಮಧು ಜೈನ್ ಹೃದಯಾಘಾತದಿಂದ ನಿಧನರಾಗಿದ್ದು, ಪತಿಯ ಅಂತ್ಯಸಂಸ್ಕಾರ ನೆರವೇರಿಸಿದ ನಂತರ ಪತ್ನಿ ಮತದಾನ ಮಾಡಿದರು.
ಮತದಾರ ಸಾವು: ಮಂಡ್ಯದ ಮಲ್ಲಾನಾಯಕನಕಟ್ಟೆಯಲ್ಲಿ ಬೊಮ್ಮೇಗೌಡ (53) ಮತದಾನ ಮಾಡಿದ ನಂತರ ಹೃದಯಾಘಾತದಿಂದ ಮೃತಪಟ್ಟರು.
ಮಳವಳ್ಳಿ ತಾಲ್ಲೂಕು ಚಿಕ್ಕಮುಲಗೂಡು ಗ್ರಾಮದಲ್ಲಿ 50 ಶಬರಿಮಲೆ ಅಯ್ಯಪ್ಪ ಮಾಲಾಧಾರಿಗಳು ಭಜನೆ ಮಾಡುತ್ತಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.