ಪಟ್ಟಣದ ವ್ಯಾಪ್ತಿಯಲ್ಲಿ ಅನಂತ್ರಾಂ ವೃತ್ತದ ಬಳಿ, ಎಸ್.ಬಿ.ಎಂ ಬ್ಯಾಂಕ್ ಹಾಗೂ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಗುಂಡಿಗಳು ಬಿದ್ದಿವೆ. ರಸ್ತೆಗೆ ಡಾಂಬರು ಹಾಕಿ ವರ್ಷಗಳೇ ಉರುಳಿದ್ದು, ಈಗ ಡಾಂಬರು ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಿದೆ. ಎಲ್ಲ ಕಡೆ ಜಲ್ಲಿ ಕಲ್ಲುಗಳು ಮೇಲೆ ಬಂದು ರಸ್ತೆಯಲ್ಲಿ ಹರಡಿಕೊಂಡು ಎರಡು ಅಡಿಗಳಷ್ಟು ಗುಂಡಿ ಬಿದ್ದಿವೆ. ಇದರಿಂದ ದ್ವಿಚಕ್ರ ವಾಹನಗಳು ಹಲವು ಬಾರಿ ಆಯಾ ತಪ್ಪಿ ಬಿದ್ದು, ಸವಾರರು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಈಗ ಮಳೆ ನೀರು ತುಂಬಿಕೊಂಡು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆಯಾಗಿದೆ.