ಮಳವಳ್ಳಿ: ‘ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಪ್ರೋತ್ಸಾಹ ಸಿಗಬೇಕು. ಮಾವಿನಹಣ್ಣು ಖರೀದಿಸಿ ರೈತರ ಕೈ ಬಲಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಜಿಲ್ಲಾಡಳಿತ, ಸಾತನೂರು ಗ್ರಾಮದ ಅಚೀವರ್ಸ್ ಇಂಟರ್ ನ್ಯಾಷನಲ್ ಶಾಲೆ ಸಹಯೋಗದೊಂದಿಗೆ ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿನ ಮಾವಿನ ತೋಟದಲ್ಲಿ ತಮಗಿಷ್ಟವಾದ ಮಾವಿನ ಹಣ್ಣು ಆಯ್ಕೆ ಮಾಡಿಕೊಳ್ಳುವ (ಮ್ಯಾಂಗೋ ಪಿಕಿಂಗ್) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕೆಲವರು ರಾಸಾಯನಿಕ ಬಳಸಿ ಮಾಗಿಸಿರುತ್ತಾರೆ. ಅದನ್ನು ತಿನ್ನುವುದೋ ಬೇಡವೋ ಎಂಬ ಗೊಂದಲದಲ್ಲಿ ಜನರ ಇರುತ್ತಾರೆ. ತೋಟದಲ್ಲೇ ತಮಗಿಷ್ಟ ಬಂದ ಮಾವಿನ ಹಣ್ಣು ಕಿತ್ತು ತಿನ್ನುವುದು, ನೇರವಾಗಿ ಮಾರುಕಟ್ಟೆ ನೀಡುವುದು, ದಲ್ಲಾಳಿ ಹಾವಳಿಯ ತಪ್ಪಿಸುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.
ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ‘ಯುವಕರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಉತ್ತಮ ಮಾರುಕಟ್ಟೆ ಸಿಗುತ್ತದೆ ಎಂಬ ನಂಬಿಕೆ ಸಿಕ್ಕರೆ ಇನ್ನೂ ಹೆಚ್ಚಿನ ಮಂದಿ ಕೃಷಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದರು.
ತೋಟದ ಮಾಲೀಕರಾದ ವೆಂಕಟೇಶ್, ಶ್ರೀನಿವಾಸ್, ಶಿವಕುಮಾರ್ ಮರದ ಮಾಹಿತಿ ನೀಡಿದರು. ಮಂಡ್ಯದಿಂದ ತೋಟಕ್ಕೆ ಅಚೀವರ್ಸ್ ಶಿಕ್ಷಣ ಸಂಸ್ಥೆ ಬಸ್ ವ್ಯವಸ್ಥೆ ಮಾಡಿತ್ತು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು, ಡಿಸಿಎಫ್ ಬಿ.ಶಿವರಾಜು, ಅಚೀವರ್ಸ್ ಸಂಸ್ಥೆಯ ಗೌರವ ಸಲಹೆಗಾರ ಮನು ಗೊರವಾಲೆ, ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಅನುಪಮಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಗೊರವಾಲೆ ಇದ್ದರು.