ಮೇಲುಕೋಟೆ: ‘ತಿರುಪತಿ ತಿರುಮಲ ದೇವಸ್ಥಾನದ ಮಾದರಿಯಲ್ಲಿ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು’ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವೈರಮುಡಿ ಉತ್ಸವದ ಅಂಗವಾಗಿ ಮೇಲುಕೋಟೆಯಲ್ಲಿ ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
‘ಆಂಧ್ರಪ್ರದೇಶದ ಟಿಟಿಡಿ ಮಾದರಿ ಪ್ರಾಧಿಕಾರ ರಚಿಸಿದರೆ ಕ್ಷೇತ್ರದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬಹುದು. ಭಕ್ತರ ಅನುಕೂಲಕ್ಕಾಗಿ 50 ಕೊಠಡಿಗಳ ಯಾತ್ರಿನಿವಾಸ್ ನಿರ್ಮಿಸಲು ತಕ್ಷಣ ಕ್ರಮವಹಿಸಲಾಗುವುದು’ ಎಂದರು.
‘ಮೇಲುಕೋಟೆಗೆ ಬಂದರೆ ಧನ್ಯತಾ ಭಾವ ಹೆಚ್ಚಲಿದೆ. ಭಕ್ತರ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮೇಲುಕೋಟೆ ವೈರಮುಡಿ ಉತ್ಸವ ಇತರ ಜಾತ್ರೆಗಳಂತಿರದೆ ವಿಶಿಷ್ಟ ಆಚರಣೆಯಾಗಿದೆ. ಈ ಕಾರಣಕ್ಕೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ, ಶಾಸಕ ಸಿ.ಎಸ್.ಪುಟ್ಟರಾಜು ಇದ್ದರು.