ಮೇಲುಕೋಟೆ: ಇಲ್ಲಿನ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಭಾನುವಾರ ಮತ್ತು ಸೋಮವಾರ ಮಹಾನವಮಿ ಮತ್ತು ವಿಜಯದಶಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಲಿವೆ.
ಭಾನುವಾರ ಆಯುಧಪೂಜೆ, ಸೋಮವಾರ ಚೆಲುವನಾರಾಯಣ ಸ್ವಾಮಿಗೆ ಮಹಾರಾಜರ ಅಲಂಕಾರ ಮಾಡಲಾಗುತ್ತದೆ. ಸಂಜೆ ಉತ್ಸವಮೂರ್ತಿಗೆ ಯುವರಾಜನ ಅಲಂಕಾರದೊಂದಿಗೆ ವಾಹನೋತ್ಸವ ಮತ್ತು ಬನ್ನಿಪೂಜೆ ನೆರವೇರುತ್ತದೆ. ನಂತರ ಕಲ್ಯಾಣನಾಯಕಿ ಅಮ್ಮನವರೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಲಿದೆ.
ಗಮನಸೆಳೆದ ಪಲ್ಲಕ್ಕಿ ಉತ್ಸವ: ಶನಿವಾರದೇವಾಲಯದ ಹೊರ ಪ್ರಾಕಾರದಲ್ಲಿ ಕಲ್ಯಾಣನಾಯಕಿ ಅಮ್ಮನವರ ದಂತದ ಪಲ್ಲಕ್ಕಿ ಉತ್ಸವ ನೆರವೇರಿತು. ವೇದಾಂತ ದೇಶಿಕರ ಸನ್ನಿಧಿಯಲ್ಲಿರುವ ನವರಾತ್ರಿ ಮಂಟಪದಲ್ಲಿ ದೇವಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಪುಳ್ಳೈ ಲೋಕಾಚಾರ್ಯರ ತಿರು ನಕ್ಷತ್ರ ಮಹೋತ್ಸವ ಸಡಗರ ಸಂಭ್ರಮದೊಂದಿಗೆ ನೆರವೇರಿತು.
ಮೆರವಣಿಗೆಯಲ್ಲಿ ಪವಿತ್ರ ತೀರ್ಥ ತಂದು ಆಚಾರ್ಯರಿಗೆ ಮಹಾಭಿಷೇಕ ನೆರವೇರಿಸಲಾಯಿತು. ನಂತರ ಮಹಾ ಮಂಗಳಾರತಿ ಮಾಡಲಾಯಿತು.