ಪಾಂಡವಪುರ: ಕೊರೊನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತರಕಾರಿ ವಿತರಣೆ ಮಾಡಲು ಸಂಸದ ಡಿ.ಕೆ.ಸುರೇಶ್ ಅವರು ತಾಲ್ಲೂಕಿನ ವಿವಿಧೆಡೆಯ ರೈತರಿಂದ ತರಕಾರಿಗಳನ್ನು ಮಂಗಳವಾರ ಖರೀದಿಸಿದರು.
ತಾಲ್ಲೂಕಿನ ಟಿ.ಎಸ್.ಛತ್ರ, ಅತ್ತಿಗಾನಹಳ್ಳಿ, ಹಳೇಬೀಡು, ಬೋಳೇನಹಳ್ಳಿ, ಗ್ರಾಮಗಳ ರೈತರ ಜಮೀನಿಗೆ ತೆರಳಿ ರೈತರಿಗೆ ಎಲೆಕೋಸು, ಟೊಮೋಟೋ, ಕಲ್ಲಂಗಡಿ, ಸಿಹಿ ಕುಂಬಳ ಸೇರಿದಂತೆ ಸುಮಾರು 150 ಟನ್ ತರಕಾರಿಗಳನ್ನು ಖರೀದಿಸಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ‘ಲಾಕ್ಡೌನ್ನಿಂದ ಎಪಿಎಂಸಿಗಳು, ಮಾರುಕಟ್ಟೆಗಳು ಬಂದ್ ಆಗಿವೆ. ರೈತರು ಬೆಳೆದ ಬೆಳೆಗಳನ್ನು ಸಾಗಣೆ ಕಷ್ಟವಾಗಿದೆ. ಜನರಿಗೆ ತರಕಾರಿ ದೊರೆಯುತ್ತಿಲ್ಲ. ಹೀಗಾಗಿ ಡಿ.ಕೆ. ಚಾರಿಟಬಲ್ ಟ್ರಸ್ಟ್ನ ಮೂಲಕ ರಾಮನಗರ ಲೋಕಸಭಾ ಕ್ಷೇತ್ರದ ಜನರಿಗೆ ಉಚಿತವಾಗಿ ತರಕಾರಿಗಳನ್ನು ವಿತರಣೆ ಮಾಡಲಾಗುವುದು. ಅದಕ್ಕಾಗಿ ನಾನೇ ಖುದ್ದಾಗಿ ಬಂದು ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿಸುತ್ತಿದ್ದೇನೆ’ ಎಂದು ತಿಳಿಸಿದರು.
ಕೊರೊನಾದಿಂದ ಜನರು ಮತ್ತು ರೈತರು ಸಂಕಷ್ಟದಲ್ಲಿದ್ದಾರೆ. ತರಕಾರಿ ಬೆಳೆದಿರುವ ರೈತರ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಂಡು ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಂಡ್ಯ ತೋಟಗಾರಿಕೆ ಉಪ ನಿರ್ದೇಶಕ ರಾಜು, ರಾಮನಗರ ತೋಟಗಾರಿಕೆ ಉಪ ನಿರ್ದೇಶಕ ಗುಣವಂತ್, ತಾಲ್ಲೂಕು ತೋಟಗಾರಿಕೆ ಹಿರಿಯ ಸಹಾಯಕಿ ಸೌಮ್ಯ, ಕೆ.ಆರ್.ಪೇಟೆ ನಿರ್ದೇಶಕ ಲೋಕೇಶ್ ಇದ್ದರು.