ವಾರ್ಡ್ ಮೀಸಲಾತಿ, ಟಿಕೆಟ್ ಗೊಂದಲ, ಪಕ್ಷ ಬದಲಾವಣೆ, ನಾಮಪತ್ರ ಸಲ್ಲಿಕೆ, ಉಮೇದುವಾರಿಕೆ ವಾಪಸ್, ಪ್ರಚಾರ ಮುಂತಾದ ಕಾರಣಗಳಿಂದ ಒಂದು ತಿಂಗಳಿಂದ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಶನಿವಾರ ವಿಶ್ರಾಂತಿಗೆ ಜಾರಿದ್ದರು. ಶ್ರಾವಣ ಶನಿವಾರವಾದ ಕಾರಣ ಕೆಲವರು ದೇವಾಲಯಗಳಿಗೆ ಭೇಟಿ ಕೊಟ್ಟು ಗೆಲುವಿಗಾಗಿ ಪೂಜೆ ಸಲ್ಲಿಸಿದರು. ನಿರಂತರ ಕೆಲಸದಿಂದಾಗಿ ಕೆಲವರಿಗೆ ಮೈಕೈನೋವು, ಗಂಟಲು ಸಮಸ್ಯೆ, ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರು. ಇನ್ನೂ ಕೆಲವರು ಪಕ್ಷದ ಕಚೇರಿಗೆ ಭೇಟಿ ನೀಡಿ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದರು.