ನಾಗಮಂಗಲ: ‘ಹೊರ ರಾಜ್ಯದವರನ್ನು ಕ್ವಾರಂಟೈನ್ ಮಾಡುವ ವಿಚಾರದಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕೇ ಹೊರತು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಬಾರದು’ ಎಂದು ಸಂಸದೆ ಸುಮಲತಾ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿ ಕಾಲಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು, ಸುಮಾರು ಅರ್ಧ ಗಂಟೆ ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ವೈದ್ಯರು, ಪೊಲೀಸರು ಮತ್ತು ಅಧಿಕಾರಿಗಳು ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಮತ್ತಷ್ಟು ಹೊರೆಯಾಗುವಂತೆ ಮಾಡಬಾರದು’ ಎಂದರು.
‘ಇಂಥ ಸಮಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಕೋವಿಡ್-19 ಪರೀಕ್ಷೆ ಮತ್ತು ಕ್ವಾರಂಟೈನ್ ಮಾಡುವುದರಿಂದ ಸೋಂಕು ಹರಡುತ್ತದೆ ಎಂಬುದು ತಪ್ಪು. ಆದ್ದರಿಂದ ಲಸಿಕೆ ಕಂಡು ಹಿಡಿಯುವವರೆಗೆ ಜನರು ಎಚ್ಚರಿಕೆಯಿಂದ ಇರುವುದು ಒಳಿತು. ಅಲ್ಲದೇ ಸಾಮಾಜಿಕ ಜಾಲತಾ ಣಗಳು ಸಹ ಜನರಲ್ಲಿ ಭಯ ಉಂಟು ಮಾಡು ತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಮೈಷುಗರ್ ಕಾರ್ಖಾನೆ ಆರಂಭಿಸುವ ವಿಚಾರದಲ್ಲಿಮಂಡ್ಯದಲ್ಲಿ ಈಚೆಗೆ ಸಭೆ ನಡೆಯಿತು. ಎಲ್ಲರೂ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ, ಕಾರ್ಖಾನೆ ಪ್ರಾರಂಭ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಕಾರ್ಖಾನೆಯನ್ನು ಸರ್ಕಾರ ನಡೆಸುತ್ತದೋ ಅಥವಾ ಖಾಸಗಿಯವರು ನಡೆಸುತ್ತಾರೋ ಅದು ಮುಖ್ಯವಲ್ಲ, ಒಟ್ಟಾರೆ ರೈತರಿಗೆ ಒಳ್ಳೆಯದಾಗಬೇಕು. ನಿಗದಿತ ಸಮಯದಲ್ಲಿ ಹಣ ರೈತರಿಗೆ ಸೇರುವುದು ಮುಖ್ಯ’ ಎಂದರು.
ದೇವಲಾಪುರ ಹೋಬಳಿಯ ತಟ್ಟಹಳ್ಳಿಯಲ್ಲಿ ಮನ್ಮುಲ್ ವತಿಯಿಂದ ನೀಡಲಾಗುತ್ತಿರುವ ದಿನಸಿ ಕಿಟ್ ವಿತರಿಸಿದರು.
ನಂತರ ಬಿಂಡಿಗನವಿಲೆ ಹೋಬಳಿಯ ನಿಷೇಧಿತ ವಲಯವಾದ ಸಾತೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಕೋವಿಡ್-19 ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳಿಹೇಳಿದರು.
ಸಂಚಾರಿ ಫೀವರ್ ಕ್ಲಿನಿಕ್ ಮತ್ತು ಗಂಟಲು ದ್ರವ ಸಂಗ್ರಹಿಸುವ ವಾಹನವನ್ನು ವೀಕ್ಷಿಸಿದರು.
ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಕುಂಞಿ ಅಹಮದ್, ತಾಲ್ಲೂಕು ಆರೋಗ್ಯಾಧಿಕಾರಿ ಧನಂಜಯ್, ಕಾಂಗ್ರೆಸ್ ಮುಖಂಡರಾದ ರಾಜೇಗೌಡ, ರಾಜೇಶ್ ಮತ್ತು ಪೋಲಿಸ್ ಸಿಬ್ಬಂದಿ ಇದ್ದರು.