ಬೆಂಗಳೂರು: ಹೆಸರಘಟ್ಟದ ಧರ್ಮರಾಯ ದೇವಸ್ಥಾನ ಸೇವಾ ಟ್ರಸ್ಟ್ ಆಶ್ರಯದಲ್ಲಿ 38ನೇ ಕರಗ ಮಹೋತ್ಸವ ಸಂಭ್ರಮದಿಂದ ಜರುಗಿತು.
ಐದು ದಿನಗಳ ಉತ್ಸವದಲ್ಲಿ ಧ್ವಜಾರೋಹಣ, ಹಸಿ ಕರಗ, ದ್ರೌಪದಿ ಅರ್ಜುನ ಕಲ್ಯಾಣೋತ್ಸವ, ಹೂವಿನ ಕರಗ, ಒನಕೆ ಧ್ವಜಸ್ತಂಭ, ಏಳು ಸುತ್ತಿನ ಮೆರವಣಿಗೆ ಕಾರ್ಯಕ್ರಮಗಳು ನಡೆದವು. ವಿಜಯಪುರ ತಾಲ್ಲೂಕಿನ ಮೇಲೂರು ಗ್ರಾಮದ ಧರ್ಮ ಐದನೇ ಬಾರಿ ಹೂವಿನ ಕರಗ ಹೊತ್ತರು.
‘ಒಂದರ್ಥದಲ್ಲಿ ಹೆಸರಘಟ್ಟದ ಕರಗ ಮಹೋತ್ಸವವು ಉಳಿದ ಕರಗ ಮಹೋತ್ಸವಕ್ಕೆ ಚಾಲನೆ ನೀಡಿದಂತೆ’ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
‘38 ವರ್ಷಗಳಿಂದ ಕರಗ ಉತ್ಸವ ನಡೆಯುತ್ತಿದೆ. ತಿಗಳರ ಸಮುದಾಯದ ವಿಶಿಷ್ಟ ಅಚರಣೆ ಇದಾಗಿದ್ದು ಗ್ರಾಮದ ಒಳಿತಿಗಾಗಿ ಆಚರಿಸಲಾಗುತ್ತಿದೆ’ ಎಂದು ಧರ್ಮರಾಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.