ಮಂಡ್ಯ: ‘ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡಬಹುದು. ಪ್ರಕೃತಿಯನ್ನು ಅರ್ಥೈಸಿಕೊಂಡರೆ ಹಲವಾರು ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ’ ಎಂದು ಮೈಸೂರಿನ ನೈಸರ್ಗಿಕ ಕೃಷಿಕ ಅವಿನಾಶ್ ಹೇಳಿದರು.
ಉಳುಮೆ ಪ್ರತಿಷ್ಠಾನ, ರೈತ ಸಂಘದ ವತಿಯಿಂದ ನಗರದ ಹಿಂದಿ ಭವನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ನೈಸರ್ಗಿಕ ಕೃಷಿ ಕಾರ್ಯಗಾರದಲ್ಲಿ ಮಾತನಾಡಿದರು.
‘ಭೂಮಿಯ ಮೇಲ್ಪರದಲ್ಲಿ ಹ್ಯೂಮಸ್ ಎನ್ನುವ ಅಂಶ ಉತ್ಪಾದನೆಯಾಗಿ ಭೂಮಿಯಲ್ಲಿ ಬೆಳಕು, ಗಾಳಿ ಸರಾಗವಾಗಿ ಹರಿದಾಡುತ್ತದೆ. ಹ್ಯೂಮಸ್ನಿಂದ ಸಾವಯವ ಇಂಗಾಲ ಸೃಷ್ಟಿಯಾಗುತ್ತದೆ. ಭೂಮಿಯೊಳಗೆ ಸಾರಾಗವಾಗಿ ನೀರು ಇಳಿದು ಅಂರ್ಜಲ ಮಟ್ಟ ಹೆಚ್ಚುತ್ತದೆ. ಬೆಳೆಗಳಿಗೆ ಗೊಬ್ಬರದ ಅವಶ್ಯಕತೆಯೇ ಉದ್ಭವಿಸುವುದಿಲ್ಲ’ ಎಂದು ಹೇಳಿದರು.
‘ಪ್ರತಿ ಜೀವ ಜಂತು ಕೂಡ ಬೆಳೆಗಳಿಗೆ ಪೂರಕವಾಗಿದೆ. ಇದನ್ನು ಯಾರೂ ಹೇಳಿಕೊಡುವುದಿಲ್ಲ. ಕೀಟನಾಶಕಗಳ ಅಂಗಡಿಯವನು ಇದನ್ನು ಹೇಳಿಕೊಟ್ಟರೆ ಆತನಿಗೆ ವ್ಯಾಪಾರವಾಗುವುದಿಲ್ಲ. ಆದ್ದರಿಂದ ಇವುಗಳನ್ನು ಹೇಳಿಕೊಡುವ ಗೋಜಿಗೆ ಹೋಗುವುದಿಲ್ಲ. ಬರೀ ಒಂದೆರಡು ಪುಸ್ತಕಗಳನ್ನು ಓದಿ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಆಳವಾದ ಅಧ್ಯಯನ ನಡೆಸಬೇಕು. 10ಸಾವಿರ ಬೋರ್ವೆಲ್ ಹಾಕಿಸಿದರೂ ಒಂದು ನದಿ ಸೃಷ್ಠಿಸಲು ಸಾಧ್ಯವಿಲ್ಲ. ನದಿಗಳು ಬೆಳೆಯಲು ಹ್ಯೂಮಸ್ ಕಾರಣವಾಗಿದೆ’ ಎಂದು ಹೇಳಿದರು.
‘ಕೃಷಿಯ ಬಗ್ಗೆ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಪ್ರಾಯೋಗಿಕವಾಗಿ ಏನು ತಿಳಿದಿರುವುದಿಲ್ಲ. ಪ್ರತಿಯೊಬ್ಬ ರೈತನೂ ವಿಜ್ಞಾನಿ ಆಗಬೇಕು. ಎಲ್ಲಿಯವರೆಗೆ ಕೃಷಿ ಸಂಬಂಧ ಹೆಚ್ಚೆಚ್ಚು ಓದುವುದಿಲ್ಲವೋ, ವಿಭಿನ್ನ ರೀತಿ ಆಲೋಚನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ದಬ್ಬಾಳಿಕೆಗೆ ಒಳಾಗುತ್ತಲೇ ಇರುತ್ತಾನೆ’ ಎಂದು ಹೇಳಿದರು.
‘ಮಣ್ಣಿನ ಫಲವತ್ತತೆ, ಇಳುವರಿ, ಬೆಳಕಿನ ಮಹತ್ವ, ಮಳೆ ನೀರು ಕೊಯ್ಲು ಮಾಡಬೇಕು. ಮನೆಗೆ ಬೇಕಾದ ಅಗತ್ಯ ಬೆಳೆಗಳನ್ನು ಬೆಳೆದುಕೊಂಡು ಹೆಚ್ಚುವರಿ ಫಸಲನ್ನು ಮಾರಾಟ ಮಾಡಿ ಜೀವನ ರೂಪಿಸಿಕೊಳ್ಳಬಹುದು. ಪರಿಣಾಮಕಾರಿಯಾಗಿ ಕೃಷಿಯಲ್ಲಿ ತೊಡಗಿಕೊಂಡರೆ ಉಪ್ಪು, ಬೆಂಕಿಪೊಟ್ಟಣ ಮಾತ್ರ ಅಂಗಡಿಯಲ್ಲಿ ಖರೀದಿಸಬಹುದು. ಉಪ್ಪುನ ರುಚಿ ನೀಡುವ ಐದು ಗಿಡಗಳಿವೆ. ವಿಜ್ಞಾನವನ್ನು ರಾಕೆಟ್ ವಿಜ್ಞಾನದಂತೆ ಮಾಡಿದ್ದು, ಇದು ರೈತರಿಗೆ ಅರ್ಥವಾಗುತ್ತಿಲ್ಲ. ಇದನ್ನು ಮನವರಿಕೆ ಮಾಡಿಕೊಡುವ ಕೆಲಸಗಳು ಆಗಬೇಕಿದೆ. ಮಾರುಕಟ್ಟೆಯಲ್ಲಿ ಸಿಗುವ ರಸಗೊಬ್ಬರಗಳ ಬದಲಿಗೆ ನಾವೇ ರಸಗೊಬ್ಬರ ಉತ್ಪಾದನೆ ಮಾಡಬೇಕು’ ಎಂದು ಸಲಹೆ ನೀಡಿದರು.
ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದ ರೈತರು ಕೃಷಿ ಬಗೆಗಿನ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಪರಿಹಾರ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.