ಮಂಡ್ಯ: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ತಹಶೀಲ್ದಾರ್ ಚಂದ್ರಶೇಖರ ಶಂ ಗಾಳಿ ತಮ್ಮ ಪುತ್ರನ 1ನೇ ವರ್ಷದ ಜನ್ಮದಿನವನ್ನು ಶ್ರೀರಂಗಪಟ್ಟಣ ತಾಲ್ಲೂಕು, ಕೆಆರ್ಎಸ್ನ ಖಾಸಗಿ ಹೋಟೆಲ್ನಲ್ಲಿ ಬುಧವಾರ ರಾತ್ರಿ ಅದ್ಧೂರಿಯಿಂದ ಆಚರಿಸಿದ್ದಾರೆ.
ಚಂದ್ರಶೇಖರ್ ಅವರ ಕುಟುಂಬ ಸದಸ್ಯರು, ಆಪ್ತರು ಸೇರಿ ಅದ್ಧೂರಿಯಿಂದ ಪಾರ್ಟಿ ಆಚರಿಸಿದ್ದಾರೆ. ಈ ವೇಳೆ ಯಾರೂ ಮಾಸ್ಕ್ ಧರಿಸಿರಲಿಲ್ಲ. ಕೋವಿಡ್ ಕಾರ್ಯಸೂಚಿಗಳನ್ನು ಪಾಲನೆ ಮಾಡಿರಲಿಲ್ಲ, ಪರಸ್ಪರ ಅಂತರ ಕಾಯ್ದುಕೊಂಡಿರಲಿಲ್ಲ.
ಕಾರ್ಯಕ್ರಮ ಆಯೋಜನೆ ಕುರಿತು ತಹಶೀಲ್ದಾರ್ ಚಂದ್ರಶೇಖರ್ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಮಧ್ಯರಾತ್ರಿವರೆಗೂ ಪಾರ್ಟಿ ಮಾಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
‘ಜನರು ಮದುವೆ ಸೇರಿ ಯಾವುದೇ ಸಮಾರಂಭ ಮಾಡಿದರೂ ಅನುಮತಿ ಪಡೆಯುತ್ತಾರೆ, ನಿಯಮ ಪಾಲನೆ ಮಾಡುತ್ತಾರೆ. ನಿಯಮ ಪಾಲನೆಯ ಬಗ್ಗೆ ಪರಿಶೀಲನೆ ಮಾಡಿ ದಂಡ ಹಾಕುತ್ತಿದ್ದ ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಳಿ ತಾವೇ ನಿಯಮ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಕುರಿತು ಕೆಆರ್ಎಸ್ ಪೊಲೀಸರು ಪ್ರಕರಣ ದಾಖಲು ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಶ್ರೀರಂಗಪಟ್ಟಣ ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.