ನವದೆಹಲಿ: ದೇಶದ ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗಲು ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ನ ಮಿತಿಮಿರೀದ ಹಸ್ತಕ್ಷೇಪ ಕಾರಣ ಎಂದು ಬಿಜೆಪಿ ಸೋಮವಾರ ಟೀಕಿಸಿದೆ.
ಮಾಜಿ ಪ್ರಧಾನಿ ಹಾಗೂ ಆರ್ಥಿಕತಜ್ಞ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವರಾಗಿದ್ದ ‘ಮಹಾನ್ ಅರ್ಥಶಾಸ್ತ್ರಜ್ಞ’ ಪಿ.ಚಿದಂಬರಂ ಹಸ್ತಕ್ಷೇಪದಿಂದ ಬ್ಯಾಂಕಿಂಗ್ ವಲಯ ಕುಸಿಯಿತು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಯುಪಿಎ ಅವಧಿಯಲ್ಲಿ ಆಪ್ತ ಉದ್ಯಮಿಗಳಿಗೆ ಸಾಲ ನೀಡುವಂತೆ ಬ್ಯಾಂಕ್ಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಹೀಗಾಗಿ ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ) ಹೆಚ್ಚಾಯಿತು ಎಂದು ಅವರು ವಿವರಿಸಿದರು.
ಚೋಕ್ಸಿಗೆ ಚಿದಂಬರಂ ಆಶೀರ್ವಾದ: ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಗೀತಾಂಜಲಿ ಸಂಸ್ಥೆಯ ಮೆಹುಲ್ ಚೋಕ್ಸಿ ಅವರಿಗೆ ಅನುಕೂಲವಾಗುವಂತೆ ಚಿದಂಬರಂ ಹೊಸ 80:20 ಚಿನ್ನ ಆಮದು ನೀತಿ ಮೂಲಕ ನೆರವು ನೀಡಿದ್ದರು ಎಂದು ಪ್ರಸಾದ್ ಆರೋಪಿಸಿದ್ದಾರೆ.
ದೇಶದ ಒಟ್ಟು ಏಳು ಖಾಸಗಿ ಕಂಪನಿಗಳಿಗೆ ಚಿನ್ನ ಆಮದು ನೀತಿ ಕೊಡುಗೆ ನೀಡುವ ಮೂಲಕ ಚಿದಂಬರಂ ಅವರು ‘ಆಶೀರ್ವಾದ’ ಮಾಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಏಳು ಕಂಪನಿಗಳಿಗೆ ಈ ನೀತಿಯ ಲಾಭ ಮಾಡಿಕೊಟ್ಟ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಚಿದಂಬರಂ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
*
ಅರ್ಥಶಾಸ್ತ್ರಜ್ಞ ಪ್ರಧಾನಿ, ಸೂಪರ್ ಆರ್ಥಿಕ ತಜ್ಞನ ಅವಧಿಯಲ್ಲಿ ಬ್ಯಾಂಕ್ಗಳ ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಯಿತು. –ರವಿಶಂಕರ್ ಪ್ರಸಾದ್, ಕೇಂದ್ರದ ಕಾನೂನು ಸಚಿವ