ಮದ್ದೂರು: ಕಾವೇರಿ ನೀರಾವರಿ ನಿಗಮದಿಂದ ಬಾಕಿ ಉಳಿಸಿಕೊಂಡಿರುವ 8 ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ನೀರುಗಂಟಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಇಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ನೀರುಗಂಟಿಗಳಾದ ಶಂಕರಯ್ಯ, ದೊಡ್ಡತಿಮ್ಮಯ್ಯ ಅಸ್ವಸ್ಥಗೊಂಡವರು. ಬಾಕಿ ವೇತನ, ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕಾವೇರಿ ನೀರಾವರಿ ನಿಗಮ ಆವರಣದಲ್ಲಿ ನೀರುಗಂಟಿಗಳು ಟಾಸ್ಕ್ ವರ್ಕರ್ಸ್ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
‘ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಂದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಷ ಕುಡಿದು ಸಾಮೂಹಿಕ ವಾಗಿ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು’ ಎಂದು ಪ್ರತಿಭಟನಕಾರರು ವಿಷದ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
‘ಬೇಡಿಕೆ ಈಡೇರಿಸುವ ತನಕ ಉಪವಾಸ ಸತ್ಯಾಗ್ರಹ ಮುಂದುವರೆಸಲಾಗುವುದು. ಸಂಬಳ ನೀಡದ ಕಾರಣ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯ ಮಾಡಿದರು.
ಸಂಘದ ಗೌರವಾಧ್ಯಕ್ಷ ರವಿ, ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಶಂಕರ್ ರಾವ್, ಕಾರ್ಯದರ್ಶಿ ಕೆ.ಸುರೇಶ್, ಸಹ ಕಾರ್ಯದರ್ಶಿ ಪುಟ್ಟೇಗೌಡ, ಖಜಾಂಚಿ ಬಸವರಾಜು, ನಿರ್ದೇಶಕರಾದ ನರಸಿಂಹಯ್ಯ, ರಘು, ರಮೇಶ, ಸುರೇಶ, ನರಸಿಂಹಯ್ಯ, ಅಲಮೇಲಮ್ಮ, ನಾಗೇಶ್ ಪಾಲ್ಗೊಂಡಿದ್ದರು.