ಮದ್ದೂರು: ಮೇ ತಿಂಗಳಲ್ಲಿ ರೈತರು ಪ್ರಗತಿಪರ ಸಂಘಟನೆಗಳ ಒಕ್ಕೂಟ ತಾಲ್ಲೂಕಿನ ಸೆಸ್ಕ್ ಅಧಿಕಾರಿಗಳ ವಿರುದ್ಧ ರೈತರೊಂದಿಗೆ ನಡೆಸಿದ ಪ್ರತಿಭಟನೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಪಟ್ಟಣದ ಪಿಎಲ್ಡಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.
ಮೆ 31ರಂದು ನಡೆದ ಚಳವಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸಂಘಟನೆಯ ಪ್ರಧಾನ ಸಂಚಾಲಕ ವಿ.ಸಿ.ಉಮಾಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಅಧೀಕ್ಷಕ ಎಂಜಿನಿಯರ್ ಹಾಗೂ ಮುಖ್ಯ ಎಂಜಿನಿಯರ್ ಕರ ನಿರಾಕರಣೆ ಚಳವಳಿ ಬಾಬ್ತು ಅಮಾನತು ಬಿಲ್ ಚಾಲ್ತಿಗೆ ಸೇರಿಸಿರುವ ಕ್ರಮ ಕೈ ಬಿಡಲು ಆಗ್ರಹಿಸಲಾಗಿತ್ತು. ಪ್ರತಿಭಟನಾ ನಿರತರ ಬೇಡಿಕೆಗೆ ಸ್ಪಷ್ಟನೆ ಹಾಗೂ ಸೂಕ್ತ ಕ್ರಮದ ಬಗ್ಗೆ ಚರ್ಚಿಸಲು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರನ್ನು ಪಟ್ಟಣದ ಸೆಸ್ಕ್ ಕಚೇರಿಗೆ ಕರೆಸಿ ಸಭೆ ನಡೆಸುವ ಭರವಸೆ ನೀಡಿದ್ದರಿಂದ ಚಳವಳಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮೈಸೂರು ಕಚೇರಿಗೆ ಬರುವಂತೆ ತಿಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ ಮಾತನಾಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರ ಉದ್ಧಟತನ ವಿರೋಧಿಸಿ
ಜೂನ್ 20ರಂದು ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಸ್ಥಳಕ್ಕೆ ಬಂದು ಉತ್ತರಿಸಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ಅಮಾನತು ಬಿಲ್ ತುಂಬಿ ಕೊಡುವಂತೆ ಚಳವಳಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘಟನೆಯ ಕಾರ್ಯನಿರ್ವಾಹಕ ಸಂಚಾಲಕ ಶ್ರೀನಿವಾಸ್ ಮಾತನಾಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಒಂದು ವಾರದೊಳಗೆ ಬಂದು ಮಾತುಕತೆ ನಡೆಸಬೇಕೆಂದು ಆಗ್ರಹಿಸಿ ಪತ್ರ ಬರೆಯಲು, ಸ್ಥಳೀಯ ಶಾಸಕರಿಗೆ ಈ ಸಮಸ್ಯೆ ಕುರಿತು ಪತ್ರ ಬರೆದು ಗಮನ ಸೆಳೆಯಲು ಸಭೆ ನಿರ್ಣಯ ಕೈಗೊಂಡಿದೆ ಎಂದರು.
ಸಂಘಟನೆಯ ಸಂಚಾಲಕರಾದ ದಯಾನಂದ ವಳಗೆರೆಹಳ್ಳಿ, ಸೊ.ಶಿ.ಪ್ರಕಾಶ್, ತಿಪ್ಪೂರು ರಾಜೇಶ್, ಗಿರೀಶ್, ರಮೇಶ್, ಗಂಗಾಧರ್, ಕೊತ್ತನಹಳ್ಳಿ ಉಮೇಶ್, ಪ್ರಭುಲಿಂಗು, ಕುಂಟನಹಳ್ಳಿ ಮರಲಿಂಗು, ಪಣ್ಣೆದೊಡ್ಡಿ ಮಹದೇವು, ಕೊಣಸಾಲೆ ಉಮೇಶ್, ಕೆ.ಟಿ.ಶಿವಕುಮಾರ್, ಹೂತಗೆರೆ ಜನಾರ್ದನ್, ಹಾಗಲಹಳ್ಳಿ ಬಸವರಾಜ್, ನಾಗರಾಜ್ ತಿಪ್ಪೂರು, ಬಸವರಾಜ್, ಜಿ.ಕೆ.ರಾಜು, ಉಮೇಶ್ ಸೊಂಪುರ, ಹರೀಶ್, ಜಗದೀಶ್, ಪ್ರಜ್ವಲ್, ವಿವೇಕ್, ಪುಟ್ಟಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.