ಅಧಿಕಾರಿ, ಸಿಬ್ಬಂದಿಗೆ ವಸತಿಗೃಹ

ಮದ್ದೂರು: ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಮಾಡಬೇಕು ಎಂಬ ಉದ್ದೇಶದಿಂದ ಪುರಸಭೆ ಆವರಣದಲ್ಲಿ ₹ 1.50 ಕೋಟಿ ಅಂದಾಜು ವೆಚ್ಚದಲ್ಲಿ ವಸತಿ ಗೃಹ ನಿರ್ಮಿಸಲು ಬಜೆಟ್ನಲ್ಲಿ ಹಣ ಮೀಸಲಿಡುವುದಾಗಿ ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್ ತಿಳಿಸಿದರು.
ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಜನರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲು ಮತ್ತು ಅಧಿಕಾರಿಗಳು ಸಕಾಲಕ್ಕೆ ಕಚೇರಿಗೆ ಬರಲು ಅನುಕೂಲವಾಗುವಂತೆ ವಸತಿ ಸಂಕಿರಣ ಕಟ್ಟಲು ಉದ್ದೇಶಿಸಲಾಗಿದೆ ಎಂದರು.
ಪುರಸಭೆ ಸದಸ್ಯ ಮ.ನ.ಪ್ರಸನ್ನಕುಮಾರ್ ಮಾತನಾಡಿ, ಪುರಸಭೆಗೆ ಸೇರಿದ ಅಂಗಡಿ ಮಳಿಗೆಗಳಲ್ಲಿ ಸರಿಯಾಗಿ ಬಾಡಿಗೆ ವಸೂಲಿ ಮಾಡುತ್ತಿಲ್ಲ. ಇದರಿಂದ ಪುರಸಭೆ ನಷ್ಟವಾಗುತ್ತಿದೆ. ಬಾಡಿಗೆಯನ್ನು ನಿಗದಿತ ಸಮಯದಲ್ಲಿ ವಸೂಲಿ ಮಾಡಿದರೆ ಪುರಸಭೆಯ ಆದಾಯ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶ್ರೀಕ ಶ್ರೀನಿವಾಸ್ ಮಾತನಾಡಿ, ಕೆಲವು ವರ್ಷದಿಂದ ಜನರು ನೀಡುವ ಸಲಹೆಗಳಿಗೆ ಮನ್ನಣೆ ನೀಡುತ್ತಿಲ್ಲ. ಇದರಿಂದ ಯಾರೂ ಬರದೆ ಸಭೆ ಅಪೂರ್ಣವಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ್ ಮಾತನಾಡಿ, ಪುರಸಭೆಯ 23 ವಾರ್ಡ್ಗಳಲ್ಲಿ ನೀರಿನ ಕಂದಾಯ ₹ 3 ಕೋಟಿ ಬಾಕಿ ಇದ್ದು, ಆಸ್ತಿ ಕಂದಾಯ ಒಂದೂವರೆ ಕೋಟಿ, ಜಾಹೀರಾತು ಮತ್ತು ವಾಣಿಜ್ಯ ಮಳಿಗೆಗಳ ಮೂಲಗಳಿಂದ ಒಟ್ಟು ₹ 4 ಕೋಟಿವರೆಗೆ ಪುರಸಭೆಗೆ ಕಂದಾಯ ಬಾಕಿ ವಸೂಲಿ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ಗಳಲ್ಲಿ ಮೇಳ ನಡೆಸಿ ಕಂದಾಯ ವಸೂಲಿ ಮಾಡಲಾಗುವುದು. ಪುರಸಭೆ ಸದಸ್ಯರು ಸಹಕರಿಸಬೇಕು ಎಂದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮಿತ್ರರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.