ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ತಡರಾತ್ರಿ ಕೆಲ ಸಮಯ ಗುಡುಗು ಸಹಿತ ಹಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಗಾಳಿ, ಗುಡುಗು ಸಿಡಿಲು ಸಹಿತ ಆಕಸ್ಮಿಕ ಮಳೆ ಆಗಿದ್ದರಿಂದ ಬೆಳೆದು ನಿಂತಿದ್ದ ಜೋಳದ ಪೈರು ಗಾಳಿಗೆ ಬಿದ್ದಿವೆ. ಕಟಾವು ಮಾಡಿದ್ದ ಕಡಲೆಯನ್ನು ಮಳೆಯಿಂದ ರಕ್ಷಿಸಲು ರೈತರು ರಾತ್ರೋ ರಾತ್ರಿ ಹೊಲಗಳಿಗೆ ತೆರಳಿ ತಾಡಪತ್ರಿಗಳನ್ನು ಹೊದಿಸಿಸಲು ಪರದಾಡಿದರು.
ಮಳೆಯಿಂದ ಹಳ್ಳಿಗಳಲ್ಲಿ ರಾತ್ರಿಯಿಡಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಅಕಾಲಿಕ ಮಳೆಯಿಂದ ಹಿಂಗಾರಿ ಬೆಳೆಗೆ ಅದರಲ್ಲೂ ಜೋಳಕ್ಕೆ ಹೆಚ್ಚು ಹಾನಿ ಆಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.