ಆಲೂರು: ವ್ಯವಸ್ಥಿತವಾಗಿ ಮತ್ತು ಹೊಸ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ತೊಡಗಿಕೊಂಡರೆ ಅದು ಲಾಭದಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ತಾಲ್ಲೂಕಿನ ಕದಾಳು ಗ್ರಾಮದ ರೈತ ಹಲಗೇಗೌಡ.
ದಶಕದ ಹಿಂದಿನ ಮಾತು. ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ನಂತರ ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಹೊಳೆದಿದ್ದೇ ಕೃಷಿ. ಹಲಗೇಗೌಡರು ಸಾವಯವ ಕೃಷಿ ಪದ್ಧತಿ ಅನುಸರಿಸಿ, ಯಾವುದೇ ರಾಸಾಯನಿಕ ಬಳಸದೆ
ಸಮೃದ್ಧ ಫಸಲು ತೆಗೆಯುವಲ್ಲಿ ಯಶಸ್ವಿಯಾದರು. ಅವರ ಸಾಧನೆ ಅನೇಕ ರೈತರಿಗೆ ಮಾದರಿಯಾಗಿದೆ.
ಆಲೂರಿನಿಂದ 8 ಕಿ.ಮೀ ಹಾಗೂ ಜಿಲ್ಲಾ ಕೇಂದ್ರ ಹಾಸನದಿಂದ 10 ಕಿ.ಮೀ ಕ್ರಮಿಸಿದರೆ ಕದಾಳು ಗ್ರಾಮದ ಸುರಭಿ ಫಾರಂ ಸಿಗುತ್ತದೆ. ಆರು ಎಕರೆ ಜಮೀನಿನಲ್ಲಿ ಹಲವು ಪಾರಂಪರಿಕ ಸಸ್ಯ, ಪ್ರಾಣಿ, ಪಕ್ಷಿಗಳೊಂದಿಗೆ ವಾಸ ಮಾಡುತ್ತಿದ್ದಾರೆ. ವಾರ್ಷಿಕ ₹5 ಲಕ್ಷದಿಂದ ₹6 ಲಕ್ಷ ಆದಾಯಗಳಿಸುತ್ತಿದ್ದಾರೆ. ಕಾಗೆ, ಕೋಳಿ, ಬೆಕ್ಕು, ಹಸುಗಳು ಸಾಕಿದ್ದಾರೆ. ವಿವಿಧ ಬಗೆಯ ಸಸಿಗಳು, ಹೂವುಗಳು ಪರಿಮಳ ಬೀರುತ್ತವೆ.
ನಿವೃತ್ತ ಶಿಕ್ಷಕ ಹಲಗೇಗೌಡ ಮತ್ತು ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ಅವರು ಡಿಪ್ಲೊಮಾ ವ್ಯಾಸಂಗ ಮಾಡಿರುವ ತಮ್ಮ ಪುತ್ರ ಭಾಸ್ಕರ್ ಅವರೊಂದಿಗೆ ಮಣ್ಣು ಮತ್ತುಬಿದಿರಿನಿಂದ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ.
ಐಟಿಐ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್, ಪೋಷಕರ ಪ್ರಕೃತಿ ಪ್ರೀತಿ ಗಮನಿಸಿ, ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ಪೂರ್ಣ ಪ್ರಮಾಣದಲ್ಲಿಕೃಷಿಯಲ್ಲಿ ತೊಡಗಿಸಿಕೊಂಡರು.
ಸ್ವರ್ಣಕಪಿಲ ತಳಿಯ ಹಸು ಸಾಕಿದ್ದಾರೆ. ಇದು ಆರು ತಿಂಗಳಿಗೊಮ್ಮೆ ತನ್ನ ಮೈಬಣ್ಣ ಬದಲಾಯಿಸುತ್ತದೆ. 2 ಕರುಗಳಿಗೆ ಜನ್ಮ ನೀಡಿದೆ. ಮಲೆನಾಡು ಗಿಡ್ಡ ಹಸುಗಳನ್ನು ಸ್ನೇಹಿತರಿಗೆ ಉಚಿತವಾಗಿ ಸಾಕಲು ನೀಡಿದ್ದಾರೆ.
ಕಡಕ್ನಾಥ್, ಟರ್ಕಿ, ಚೀನಾ, ಫ್ಯಾಷನ್, ಬಾತುಕೋಳಿ, ನಾಟಿ ಕೋಳಿ ಸೇರಿದಂತೆ 600ಕ್ಕೂ ಹೆಚ್ಚು ಕೋಳಿ ಸಾಕಿದ್ದಾರೆ. ಟರ್ಕಿ ಕೋಳಿ ಮಾಂಸದಲ್ಲಿಉತ್ತಮ ಪೌಷ್ಟಿಕಾಂಶ ಇದೆ. ಒಂದು ಕತ್ತೆಯೂ ಇದೆ.
ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಬಿ.ಪಿ, ಶುಗರ್, ಹೊಟ್ಟೆಯಲ್ಲಿ ಕಲ್ಲು,ಇತರೆ ಕಾಯಿಲೆಗಳಿಗೆ ಔಷಧಿ ಒದಗಿಸುವ ಸಸ್ಯ ಸಂಕುಲವಿದೆ. ಹೊರ ದೇಶದಲ್ಲಿಬೆಳೆಯುವ ಲಿಕ್ಕಿ, ಕ್ಯಾಂಡಲ್ ಫ್ರೂಟ್, ಎಗ್ ಫ್ರೂಟ್, ಲಕೋಟ, ಬಿರಿಬಾ, ಮಲಬಾರ್, ಮಲಯನ್, ರೋಸ್ ಆ್ಯಪಲ್ ಸೇರಿದಂತೆ ವಿವಿಧ ಹಣ್ಣಿನ ಮರಗಳಿವೆ.
24 ನಕ್ಷತ್ರ ಗಿಡ, ಸೌಗಂಧಿಕ ಪುಷ್ಪ, ಕೃಷ್ಣ ಕಮಲ, ಸೀತಾ, ಅಶೋಕ, ಅರ್ಜುನ,ನಾಗಲಿಂಗಪುಷ್ಪ, ಬೈನೆ, ನೇರಳೆ, ನೆಲ್ಲಿಕಾಯಿ, ಪನ್ನೇರಲು ಸೇರಿದಂತೆ ಕಾಡಿನಲ್ಲಿ ದೊರಕುವ ಹಲವು ಜಾತಿ ಗಿಡ, ಮರಗಳಿವೆ.
ಕೃಷಿ ಹೊಂಡದಲ್ಲಿ ಮೀನು ಸಾಕಣೆ ಮಾಡಿದ್ದಾರೆ. ಇದೇ ನೀರನ್ನು ಬೇಸಿಗೆಯಲ್ಲಿ ಬೆಳೆಗೆ ಬಳಸುತ್ತಾರೆ. ಆದ್ದರಿಂದ ಬೆಳೆಗೆ ಭೌತಿಕವಾಗಿ ಸಾವಯವಅಂಶ ದೊರಕುತ್ತದೆ.
ತೋಟದಲ್ಲಿ ಹಕ್ಕಿಗಳ ಕಲರವ
‘ಕೋಳಿ, ಪಕ್ಷಿ, ಪ್ರಾಣಿ ಗೊಬ್ಬರವನ್ನು ಗಿಡ, ಮರಗಳಿಗೆ ಬಳಸಲಾಗಿದೆ. ಹತ್ತುವರ್ಷದಿಂದ ಮನೆಯಲ್ಲಿರುವ ಯಾರೊಬ್ಬರೂ ಆಸ್ಪತ್ರೆಗೆ ಹೋಗಿಲ್ಲ. ಗಿಡಮೂಲಿಕೆ ತೆಗೆದುಕೊಳ್ಳುತ್ತಿದ್ದೇವೆ. ಪತ್ನಿ, ಮಗ ನನಗೆ ಬೆಂಬಲವಾಗಿದ್ದಾರೆ. ಬೆಳಿಗ್ಗೆ, ಸಂಜೆ ಇಲ್ಲಿ ಹಕ್ಕಿಗಳ ಕಲರವ ಕೇಳುವುದೇ ಆನಂದ’ ಎನ್ನುತ್ತಾರೆಹಲಗೇಗೌಡ.
‘ರಾಸಾಯನಿಕ ಬಳಸದೆ ಕಳೆರಹಿತ ಕೃಷಿ ಮಾಡಿದ್ದೇನೆ. ಭೂಮಿ ಫಲವತ್ತತೆ ಹೆಚ್ಚಿದೆ. ವರ್ಷಕ್ಕೆ ₹6 ಲಕ್ಷ ಆದಾಯ ಇದೆ’ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.