ಶ್ರೀರಂಗಪಟ್ಟಣ: ಪಟ್ಟಣದ ಶಿಕ್ಷಕರ ಭವನದ ಪಕ್ಕದಲ್ಲಿರುವ ಶತಮಾ ನೋ ತ್ಸವದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹಿಂದಿನ ಭಾಗ ಕುಸಿದು ಬಿದ್ದಿದೆ.
ಭಾನುವಾರ ಸುರಿದ ಬಾರಿ ಮಳೆಗೆ ಶಾಲೆಯ ಕಟ್ಟಡದ ಕೊಠಡಿ ಯೊಂದು ಸಂಪೂರ್ಣ ಕುಸಿದಿದೆ. ಈ ಕೊಠಡಿಯಲ್ಲಿ ಇಟ್ಟಿದ್ದ ಮರದ ಬೀರು ಇತರ ಸಾಮಾನುಗಳು ಹಾನಿಗೀಡಾಗಿವೆ.
ಶಾಲೆಯ ಬಿಸಿಯೂಟದ ಮನೆಗೆ ಹೊಂದಿಕೊಂಡ ಕೊಠಡಿ ಕುಸಿದಿದ್ದು, ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಗೆ ಆತಂಕ ಉಂಟಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಸೋಮವಾರ ಶಾಲೆಗೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
ಶತಮಾನದ ಹಿಂದೆ ಚುರಕಿ ಗಾರೆಯಿಂದ ನಿರ್ಮಿಸಿರುವ ಈ ಶಾಲೆಯ ಇಡೀ ಕಟ್ಟಡ ಶಿಥಿಲವಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯ ರಕ್ಷಣೆಯ ದೃಷ್ಟಿಯಿಂದ ತರಗತಿಗಳನ್ನು ಹೊಸ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಿಸಬೇಕು ಎಂದು ಶಾಲೆಯ ಎಸ್ಡಿಎಂಸಿ ಸದಸ್ಯರು ಆಗ್ರಹಿಸಿದ್ದಾರೆ.
ಆಲಗೂಡು: ತಾಲ್ಲೂಕಿನ ಆಲಗೂಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಂಜಾಂ ಮೀನುಗಾರಿಕಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳಲ್ಲಿ ನೀರು ಜಿನುಗುತ್ತಿದೆ. ಆಲಗೂಡು ಶಾಲೆಯ ಅಡುಗೆ ಮನೆ ಜಲಾವೃತವಾಗಿದೆ. ಎರಡೂ ಕಟ್ಟಡಗಳು ಶಿಥಿಲಗೊಂಡಿದ್ದು ದುರಸ್ತಿ ಮಾಡಿಸಬೇಕು ಎಂದು ಆಯಾ ಶಾಲೆಗಳ ಶಿಕ್ಷಕರು ಮನವಿ ಮಾಡಿದ್ದಾರೆ.