ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಚೆಲುವನಾರಾಯಣಸ್ವಾಮಿ, ಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ: ರಾಜ– ರಾಣಿಯರ ವಿಗ್ರಹಕ್ಕೆ ಗೌರವಾರ್ಪಣೆ
Last Updated 7 ಜುಲೈ 2020, 12:10 IST
ಅಕ್ಷರ ಗಾತ್ರ

ಮೇಲುಕೋಟೆ: ಮುಮ್ಮುಡಿ ಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ಖಾಸ ವರ್ಧಂತಿಯ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ನೆರವೇರಿಸುವುದರೊಂದಿಗೆ ಶ್ರೀಕೃಷ್ಣರಾಜಮುಡಿ ಆಷಾಢ ಜಾತ್ರಾಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

ಇದೇ ವೇಳೆ ಯೋಗಾನರಸಿಂಹಸ್ವಾಮಿಗೂ ಅಭಿಷೇಕ ನೆರವೇರಿತು. ವೇದ ಮತ್ತು ಮಂಗಳವಾದ್ಯದೊಂದಿಗೆ ನಡೆದ ಮಹಾಭಿಷೇಕದಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಮಹಾಅಭಿಷೇಕ ಮತ್ತು ಕಲ್ಯಾಣೋತ್ಸವದೊಂದಿಗೆ ಆರಂಭವಾದ ಶ್ರೀಕೃಷ್ಣರಾಜಮುಡಿ ಆಷಾಡ ಜಾತ್ರಾಮಹೋತ್ಸವ ಜುಲೈ 17ರವರೆಗೆ ವಿವಿಧ ಉತ್ಸವಗಳು ನಡೆಯಲಿದೆ. ಜುಲೈ 12ರಂದು ವಜ್ರಖಚಿತ ಕೃಷ್ಣರಾಜಮುಡಿ ಕಿರೀಟಧಾರಣೆ ಮಾಡಲಾಗುತ್ತದೆ.

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 5-30ಕ್ಕೆ ನಿತ್ಯ ಪೂಜಾ ಕೈಂಕರ್ಯಗಳನ್ನು ಆರಂಭಿಸಿ 8 ಗಂಟೆ ವೇಳೆಗೆ ಮುಕ್ತಾಯ ಮಾಡಲಾಯಿತು. ನಂತರ ಸ್ನಪನಪೂರ್ವಕವಾಗಿ ಕಳಸಗಳನ್ನು ಸ್ಥಾಪಿಸಿ ಚೆಲುವನಾರಾಯಣಸ್ವಾಮಿ, ಯದುಗಿರಿನಾಯಕಿ ಅಮ್ಮನವರು, ಆಚಾರ್ಯ ರಾಮಾನುಜಾಚಾರ್ಯರು ನಮ್ಮಾಳ್ವಾರ್ ವಿಶ್ವಕ್ಸೇನರಿಗೆ ಮಹಾಭಿಷೇಕ ನೆರವೇರಿಸಲಾಯಿತು. ಹಾಲು ಮೊಸರು, ಚಂದನ, ಮುಂತಾದ ದಿವ್ಯಪರಿಕರಗಳಿಂದ ಭಗವಂತನಿಗೆ ಅಭಿಷೇಕ ನೆರವೇರಿಸಿ ನಾಡಿನೆಲ್ಲೆಡೆ ಹರುತ್ತಿರುವ ಸಾಂಕ್ರಾಮಿಕ ಮಹಾಮಾರಿ ಕೊರೊನಾ ವೈರಸ್ ನಾಶವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಮಹಾಭಿಷೇಕದಲ್ಲಿ ಪಾಲ್ಗೊಂಡಿದ್ದರು.

ಕಲ್ಯಾಣೋತ್ಸವ: ಕೃಷ್ಣರಾಜಮುಡಿ ಬ್ರಹ್ಮೋತ್ಸವ ಹಾಗೂ ಮುಮ್ಮುಡಿ ಕೃಷ್ಣರಾಜ ಒಡೆಯರ್ ವರ್ಧಂತಿಯ ನಿಮಿತ್ತ ಸಂಜೆ ಚೆಲುವನಾರಾಯಣಸ್ವಾಮಿ ಹಾಗೂ ಕಲ್ಯಾಣನಾಯಕಿ ಅಮ್ಮನವರಿಗೆ ಕಲ್ಯಾಣೋತ್ಸವ ನಡೆಯಿತು. ದೇವಾಲಯದ ಒಳಭಾಗ ನಡೆದ ಕಾರ್ಯಕ್ರಮದಲ್ಲಿ ಸಮನ್ಮಾಲೆ, ಲಾಜಾಹೋಮ ಸೇರಿದಂತೆ ಮದುವೆಯ ವಿವಿಧ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದೇ ವೇಳೆ ಕೃಷ್ಣರಾಜ ಒಡೆಯರ್ ಮತ್ತು ರಾಣಿಯರ ಭಕ್ತವಿಗ್ರಹಕ್ಕೆ ವಿಶೇಷ ಗೌರವಾರ್ಪಣೆ ಮಾಡಲಾಯಿತು.

ಕಾಳಮ್ಮನಹಬ್ಬ: ಮೇಲುಕೋಟೆಯ ಮುಖ್ಯರಸ್ತೆಯಲ್ಲಿರುವ ಕಾಳಮ್ಮನ ಗುಡಿಯಲ್ಲಿ ಕಾಳಮ್ಮನ ಹಬ್ಬ ನೆರವೇರಿತು. ದೇವಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ನಿಂಬೆಹಣ್ಣಿನಿಂದ ದೇವಿಯನ್ನು ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT