ಶ್ರೀರಂಗಪಟ್ಟಣ: ಪಟ್ಟಣದ ಬೆಂಗಳೂರು ಗೇಟ್ ಬಳಿಯ ಐತಿಹಾಸಿಕ ಬುರುಜು ಗುರುವಾರ ರಾತ್ರಿ ಕುಸಿದಿದೆ.
ಪಟ್ಟಣದ ಪುರಸಭೆ ಕಚೇರಿಗೆ ಹೊಂದಿಕೊಂಡಿರುವ ಬುರುಜು ಎರಡು ದಿನ ಸುರಿದ ಮಳೆಗೆ ಶೇ 30 ಭಾಗ ಕುಸಿದು ಬಿದ್ದಿದೆ. ಬುರುಜಿನ ರಕ್ಷಣೆಗೆ ಸುತ್ತಲೂ ಕಟ್ಟಿದ್ದ ಕಲ್ಲಿನ ಗೋಡೆಯ ದಪ್ಪ ಗಾತ್ರದ ಕಪ್ಪು ಕಲ್ಲುಗಳೂ ಉರುಳಿವೆ.
‘ನೆಲ ಮಟ್ಟದಿಂದ ಸುಮಾರು 35 ಅಡಿ ಎತ್ತರದ ಬುರುಜಿನ ಮೇಲೆ ಬೆಳೆ ದಿದ್ದ ಮರಗಳ ಬೇರುಗಳು ಬುರುಜನ್ನು ಶಿಥಿಲಗೊಳಿಸಿದ್ದರಿಂದ ಕುಸಿದಿದೆ’ ಎಂದು ಸ್ಥಳೀಯರು ಹೇಳುತ್ತಾರೆ.
‘ಬುರುಜು ಮತ್ತು ಕೋಟೆಗಳ ಮೇಲೆ ಮರ, ಗಿಡಗಳು ಬೆಳೆದಿದ್ದು, ಸ್ಮಾರಕಗಳ ಅಸ್ತಿತ್ವಕ್ಕೆ ಮಾರಕವಾಗಿದೆ. ಪ್ರಾಚ್ಯವಸ್ತು ಇಲಾಖೆಯು ಪಟ್ಟಣದ ಮಹತ್ವದ ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ’ ಎಂದು ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ದೂರಿದ್ದಾರೆ.