ಮಂಡ್ಯ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಬೂದನೂರು ಕೆರೆ ಏರಿ ಒಡೆದು ಹೋಗಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಕೆರೆ ನೀರು ನುಗ್ಗಿದ್ದು ಹೆದ್ದಾರಿ ಸಂಪರ್ಕ ಬಂದ್ ಆಗಿದೆ.
ಮಂಡ್ಯ - ಮೈಸೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಬದಲಿ ಮಾರ್ಗದ ಮೂಲಕ ವಾಹನಗಳು ಸಂಚರಿಸುತ್ತಿವೆ. ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ಮದ್ದೂರಿನಲ್ಲೇ ತಡೆಯಲಾಗುತ್ತಿದೆ. ಭಾರತೀನಗರ ಮೂಲಕ ವಾಹನಗಳು ಮಂಡ್ಯ ತಲುಪುತ್ತಿವೆ.
ಮೈಸೂರು ಕಡೆಯಿಂದ ಬರುವ ವಾಹನಗಳು ಮಂಡ್ಯ ಗುತ್ತಲು ರಸ್ತೆ, ಭಾರತೀನಗರ ಮೂಲಕ ಮದ್ದೂರು ತಲುಪುತ್ತಿವೆ.
ಕೆರೆ ಏರಿ ಒಡೆದು ಹೋಗಿರುವ ಕಾರಣ ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿದೆ. ಹೆದ್ದಾರಿಯಲ್ಲಿ ಏಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.