ಶ್ರೀರಂಗಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕುಡಿಯುವ ನೀರಿಲ್ಲದೆ ಜನರು ಬವಣೆ ಪಡುತ್ತಿದ್ದಾರೆ ಎಂದು ಗಂಜಾಂ ನಿರ್ಮಲಾ ಇತರರು ದೂರಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಡಿ. ನಾಗೇಶ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಗಂಜಾಂ, ಪಟ್ಟಣ ಹಾಗೂ ವಿವಿಧ ಗ್ರಾಮಗಳ ಜನರು ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಮಿನಿ ವಿಧಾನಸೌಧಕ್ಕೆ ವಿವಿಧ ಕೆಲಸಗಳಿಗಾಗಿ ದೂರದ ಊರುಗಳಿಂದ ಬರುವ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಕಚೇರಿಯಲ್ಲಿ ಮಣಗಟ್ಟಲೆ ಕಸದ ರಾಶಿ ಬಿದ್ದಿದೆ. ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಮರಳಾಗಾಲ ಮಂಜುನಾಥ್ ದೂರಿದರು.
ಅಹವಾಲು ಆಲಿಸಿ ಮಾತನಾಡಿದ ತಹಶೀಲ್ದಾರ್ ಡಿ. ನಾಗೇಶ್, ‘ಮಿನಿ ವಿಧಾನಸೌಧದಲ್ಲಿದ್ದ ಕುಡಿಯುವ ನೀರಿನ ಘಟಕ ಕೆಟ್ಟಿದೆ. ಆದಷ್ಟು ಶೀಘ್ರ ಅದನ್ನು ದುರಸ್ತಿ ಮಾಡಿಸಲಾಗುವುದು. ಜನರು ಕೂರಲು ಆಸನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಡೆಗೆ ಗಮನ ಹರಿಸುತ್ತೇನೆ’ ಎಂದು ತಿಳಿಸಿದರು.
ಪುಟ್ಟಮ್ಮ, ಪಾಲಹಳ್ಳಿ ನರಸಿಂಹ, ಮೈಸೂರಿನ ಪ್ರೇಮಕುಮಾರಿ, ಸುಧಾಮಣಿ ಇದ್ದರು.