ಮಂಡ್ಯ: ವಿಧಾನಪರಿಷತ್ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರ ಬೆಂಬಲ ಯಾರಿಗೆ ಎಂಬ ಚರ್ಚೆ ಜಿಲ್ಲೆಯಾದ್ಯಂತ ಗರಿಗೆದರಿದೆ. ‘ಯಾರಿಗೂ ಬೆಂಬಲ ನೀಡುವುದಿಲ್ಲ, ಯಾರಿಗೂ ಬೆಂಬಲ ನೀಡದೆಯೂ ಇರುವುದಿಲ್ಲ’ ಎಂದು ಸುಮಲತಾ ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.
‘ಸುಮಲತಾ ಬೆಂಬಲ ಬಿಜೆಪಿಗೆ ದೊರೆಯಲಿದೆ. ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿಯವರೇ ಅವರಿಗೆ ಬೆಂಬಲ ಘೋಷಿಸಿದ್ದರು. ಅದನ್ನು ನೆನಪಿಸಿಕೊಂಡಾದರೂ ಸುಮಲತಾ ಬಿಜೆಪಿ ಬೆಂಬಲಿಸಬೇಕು’ ಎಂದು ಬಿಜೆಪಿ ಬೆಂಬಲಿಗರು ಹೇಳುತ್ತಾರೆ.
‘ಅಂಬರೀಷ್ ಅವರು ಅಪ್ಪಟ ಕಾಂಗ್ರೆಸ್ಸಿಗ, ಸುಮಲತಾ ಗೆಲುವಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಬಹಳ ದೊಡ್ಡದಿದೆ. ಹೀಗಾಗಿ ಅವರು ಕಾಂಗ್ರೆಸ್ ಬೆಂಬಲಿಸುತ್ತಾರೆ’ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.