ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ- ಕೆಆರ್ಎಸ್ ಮತ್ತು ಮೈಸೂರು–ಕೆಆರ್ಎಸ್ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ಜನರು ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಬೆಳಗೊಳ ಪಂಪ್ಹೌಸ್ ಬಳಿ ಪ್ರತಿಭಟನೆ ನಡೆಯಿತು. ಮೈಸೂರು– ಕೆಆರ್ಎಸ್ ಮತ್ತು ಶ್ರೀರಂಗಪಟ್ಟಣ– ಕೆಆರ್ಎಸ್ ನಡುವೆ ಸಂಚರಿಸುವ ವಾಹನಗಳನ್ನು ತಡೆದು ಪ್ರತಿಭಟಿಸಿದರು. ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆದ ಕಾರಣ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಆರ್ಎಸ್, ಹುಣಸೂರು, ಕೊಡಗು, ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರ ತೆರಳಬೇಕಾದ ಪ್ರಯಾಣಿಕರು ಪರದಾಡಿದರು.
ಕೆಆರ್ಎಸ್ ಸಂಪರ್ಕ ರಸ್ತೆಯನ್ನು ₹ 9.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ರಸ್ತೆಯನ್ನು ಅಗೆದಿದ್ದು, 3 ತಿಂಗಳಿಂದ ಹಾಗೇ ಬಿಡಲಾಗಿದೆ. ಜಲ್ಲಿ ಕಲ್ಲುಗಳು ಮೇಲೆ ಎದ್ದಿದ್ದು ವಾಹನಗಳ ಚಕ್ರಕ್ಕೆ ಸಿಕ್ಕಿ ಸಿಡಿಯುತ್ತಿವೆ. ರಸ್ತೆ ಪಕ್ಕದ ಮನೆ, ಅಂಗಡಿ ಮತ್ತು ಬೆಳೆಗಳಿಗೆ ದೂಳು ಹರಡುತ್ತಿದೆ. ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಇರುವುದರಿಂದ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಪಶ್ಚಿಮವಾಹಿನಿಯಿಂದ ಎಂಎನ್ಪಿಎಂ ವೃತ್ತದವರೆಗೆ 6 ಕಿ.ಮೀ. ಸಂಚರಿಸಲು ಒಂದು ತಾಸು ಬೇಕಾಗುತ್ತದೆ. ಈ ಸಮಸ್ಯೆ ಕುರಿತು ಎಂಜಿನಿಯರ್ಗಳಿಗೆ ಹಲವು ಬಾರಿ ಹೇಳಿದ್ದರೂ ಸ್ಪಂದಿಸುತ್ತಿಲ್ಲ ಎಂದು ಮುಖಂಡ ಬೆಳಗೊಳ ಸುನಿಲ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮೂರು ದಿನಗಳಲ್ಲಿ ಕಾಮಗಾರಿಯನ್ನು ಆರಂಭಿಸಬೇಕು. ಇಲ್ಲದಿದ್ದರೆ ಪಟ್ಟಣದ ಲೋಕೋ ಪಯೋಗಿ ಇಲಾಖೆ ಕಚೇರಿ ಎದುರು ಸೆಗಣಿ ಚಳವಳಿ ನಡೆಸುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಎಂಜಿನಿಯರ್ ರೇವಣ್ಣ, ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.