ವಿಜಯಪುರ: ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿ ಸವಿಯಬೇಕೆನ್ನುವ ಗುಮ್ಮಟ ನಗರಿಯ ಜನರಿಗೆ ಆರಂಭದಲ್ಲಿ ಧಾರಣೆ ಬಿಸಿ ತಟ್ಟಿತ್ತು. ಈಗ ಆವಕ ಹೆಚ್ಚಳವಾಗಿರುವುದರಿಂದ ಬೆಲೆ ಕಡಿಮೆಯಾಗಿದ್ದು, ಎಲ್ಲಾ ವರ್ಗದ ಗ್ರಾಹಕರು ಖುಷಿಯಿಂದ ಮಾವಿನ ರುಚಿ ಸವಿಯುತ್ತಿದ್ದಾರೆ.
ಆರಂಭದಲ್ಲಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಮಾವಿನ ಹಣ್ಣು ಬರುತ್ತಿತ್ತು. ಪರಿಣಾಮ ಸಾಮಾನ್ಯರಿಗೆ ನಿಲುಕದಷ್ಟು ಬೆಲೆ ಹೆಚ್ಚಿತ್ತು. ಈಗ ಹಣ್ಣಿನ ಆವಕ ಹೆಚ್ಚಳವಾಗುತ್ತಿರುವುದರಿಂದಬೆಲೆ ಇಳಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಮಾರ್ಚ್ ಮೊದಲ ವಾರಕ್ಕಿಂತ ಶೇ 50 ರಷ್ಟು ಬೆಲೆ ಕಡಿಮೆಯಾಗಿದೆ. ಇದರಿಂದ ಬಡವರು, ಶ್ರೀಮಂತರು ಎನ್ನದೆ ಹಣ್ಣಿನ ರುಚಿ ಸವಿಯಲು ಮುಂದಾಗಿದ್ದಾರೆ.
‘ಮಾರ್ಕೆಟ್ನಲ್ಲಿ ಸದ್ಯ ರತ್ನಗಿರಿ ಆಫೂಸ್, ದೇವಗಡ್ ಪೈರಿಗೆ ಹೆಚ್ಚಿನ ಬೇಡಿಕೆ ಐತಿ. ಆರಂಭದಲ್ಲಿ ಆಫೂಸ್ ಡಜನ್ಗೆ ₹1200 ರಿಂದ ₹1500, ದೇವಗಡ್ ಪೈರಿಗೆ ₹700 ರಿಂದ ₹800 ಮಾರಾಟ ಆಗುತ್ತಿತ್ತು. ಇದೀಗ ಆವಕ ಹೆಚ್ಚಿರುವ ಕಾರಣ ಆಫೂಸ್ ₹500 ರಿಂದ ₹600, ಪೈರಿ ₹300 ರಿಂದ ₹350ಕ್ಕೆ ಮಾರಾಟವಾಗುತ್ತಿದೆ. ಆವಕ ಕಡಿಮೆಯಾದ ನಂತರ ಮತ್ತೆ ಬೆಲೆ ಹೆಚ್ಚಳವಾಗಲಿದೆ. ಬೆಲೆ ಜಾಸ್ತಿ ಇದ್ದಾಗ ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದರು. ಇದೀಗ ಗಣನೀಯ ಪ್ರಮಾಣದಲ್ಲಿ ಮಾರಾಟ ಹೆಚ್ಚಾಗಿದೆ’ ಎಂದು ಮಾವಿನ ಹಣ್ಣಿನ ವ್ಯಾಪಾರಿ ಶಬ್ಬೀರ್ ಅಹ್ಮದ್ ಬಾಗವಾನ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ವ್ಯಾಪಾರ ಕೇವಲ ವಿಜಯಪುರ ನಗರಕ್ಕೆ ಸೀಮಿತವಾಗಿಲ್ಲ. ಬೆಂಗಳೂರು, ಮೈಸೂರು, ರಾಯಚೂರು, ಬಾಗಲಕೋಟೆ, ಚೆನ್ನೈ, ಕಲಬುರ್ಗಿ ಸೇರಿದಂತೆ ವಿವಿಧೆಡೆ ನೆಲೆಸಿರುವ ನಮ್ಮೂರಿನ ಜನರು, ಪ್ರತಿ ಸೀಜನ್ದಲ್ಲಿ ಐದಾರು ಡಜನ್ಗಳಷ್ಟು ಹಣ್ಣನ್ನು ನಮ್ಮಿಂದ ತರಿಸಿಕೊಳ್ಳುತ್ತಾರೆ. ನಮ್ಮಲ್ಲಿ ಗುಣಮಟ್ಟದ ಹಣ್ಣು ಮಾತ್ರ ದೊರೆಯುತ್ತವೆ’ ಎಂದು ಹೇಳಿದರು.
‘ಹಣ್ಣಿನ ಬೆಲೆ ಹೆಚ್ಚಿದ್ದ ಪರಿಣಾಮ ಮಾವು ತಿನ್ನುವ ಮಹದಾಸೆಯಿದ್ದರೂ ಖರೀದಿಸಲು ಆಗುತ್ತಿರಲಿಲ್ಲ. ಆದರೆ, ಈಗ ಬೆಲೆ ಕಡಿಮೆ ಆಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಖರೀದಿಸಿದ್ದೇನೆ’ ಎಂದು ಗ್ರಾಹಕ ಸೋಮನಗೌಡ ಪಾಟೀಲ ಹೇಳಿದರು.
‘ನಮ್ಮಲ್ಲಿ ಸಿಗುವಹಣ್ಣುಗಳು ಹುಳಿ ಮತ್ತು ಜುಬ್ರ ಇರುವುದರಿಂದ ಹೆಚ್ಚಾಗಿ ತಿನ್ನಲು ಇಷ್ಟ ಆಗುವುದಿಲ್ಲ. ರತ್ನಗಿರಿ ಆಫೂಸ್, ಹೈದ್ರಾಬಾದ್ ಬೇನ್ಸ್, ದೇವಗಡ್ ಪೈರಿ ಹಣ್ಣು ಬಹಳ ರಚಿ ಇರ್ತಾವು. ಎಷ್ಟು ತಿಂದರು ಇನ್ನೂ ತಿನ್ನಬೇಕುಅನಿಸುತ್ತದೆ. 15 ದಿನಗಳ ಹಿಂದೆ ಅರ್ಧ ಡಜನ್ ಖರೀದಿಸಿದ್ದೆ. ಇದೀಗ ಎರಡು ಡಜನ್ ತೆಗೆದುಕೊಂಡಿದ್ದೇನೆ’ ಎಂದು ಶಶಿಕಲಾ ಬಿರಾದಾರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.