ಶಿವಮೊಗ್ಗ: ಅಪಘಾತಗಳನ್ನು ತಡೆಯಲು ಹೆಚ್ಚು ಅಪಘಾತವಾಗುವ ರಸ್ತೆಯ ಪಕ್ಕದಲ್ಲಿ ಪ್ರತಿಫಲನ(ರಿಫ್ಲೆಕ್ಟರ್) ವೇಗ ನಿಯಂತ್ರಣ ಫಲಕವನ್ನು ದೊಡ್ಡದಾಗಿ ಅಳವಡಿಸುವಂತೆಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಅತಿ ಹೆಚ್ಚು ಅಪಘಾತ ಸಂಭವಿಸುವ ವ್ಯಾಪ್ತಿಯನ್ನು ಗುರುತಿಸಿ ಅದನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕು. ಅಂತಹ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಇಂಟರ್ಸೆಪ್ಟರ್ ವಾಹನಗಳ ಸಂಖ್ಯೆ ಹೆಚ್ಚಳ,ಬ್ಯಾರಿಕೇಡ್ಗಳನ್ನು ಅಳವಡಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.ಶಿವಮೊಗ್ಗ ನಗರದಲ್ಲಿ ಅವೈಜ್ಞಾನಿಕವಾಗಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ ವೈಜ್ಞಾನಿಕ ಉಬ್ಬುಗಳನ್ನು ನಿರ್ಮಿಸುವುದರಿಂದ ಅಪಘಾತದ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಲಕ್ಷ್ಮೀ ಟಾಕೀಸ್ ರಸ್ತೆಯಿಂದ ಜೈಲ್ ವೃತ್ತದವರೆಗೆ ವಾಹನ ದಟ್ಟಣೆ ಹೆಚ್ಚಾಗಿದೆ. ಈ ರೀತಿ ಸುಗಮ ಸಂಚಾರಕ್ಕಾಗಿ ಅಗಲೀಕರಣ ಮಾಡಬಹುದಾದ ರಸ್ತೆಗಳ ಪ್ರಸ್ತಾವನೆಯನ್ನು ಸಲ್ಲಿಸಬೇಕು. ರಸ್ತೆ ಬದಿ ಅತಿಕ್ರಮಣಗಳನ್ನು ತೆರವುಗೊಳಿಸಿ ಆಟೊರಿಕ್ಷಾ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ರಸ್ತೆ ಅತಿಕ್ರಮಣ ಮಾಡಿಕೊಂಡಿರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಕೈಗೊಳ್ಳಬೇಕು. ಹೊಳೆ ಬಸ್ ನಿಲ್ದಾಣದಿಂದಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೆ ಹಾದು ಹೋಗುವ ಬಿ.ಎಚ್.ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳ ರಸ್ತೆ ಕಿರಿದಾಗಿದ್ದು ಇದನ್ನು ಅಗಲೀಕರಣಗೊಳಿಸುವ ಅಗತ್ಯವಿದೆ ಎಂದರು.
ಖಾಸಗಿ ಬಸ್ಗಳ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಖಾಸಗಿ ಬಸ್ನಿಲ್ದಾಣದ ಹಿಂಭಾಗ ನಡೆಯುವ ಸಂತೆಯನ್ನು ಚುನಾವಣೆ ಬಳಿಕ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಇದೇ ರೀತಿ ಖಾಸಗಿ ಬಸ್ಗಳ ಕೊನೆ ನಿಲ್ದಾಣನಿರ್ಮಿಸಲು ಪ್ರಸ್ತುತ ಖಾಸಗಿ ಬಸ್ ನಿಲ್ದಾಣದ ಎದುರು ಇರುವ ನಿವೇಶನದ ತಕರಾರು ಯಾವ ಹಂತದಲ್ಲಿದೆ ಎಂಬುವುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆಸೂಚಿಸಿದರು.
ನಗರದಲ್ಲಿ ವೃತ್ತಗಳ ಅಭಿವೃದ್ಧಿ:ನಗರದ ವೃತ್ತಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು. ಈ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಬ್ಯಾಂಕುಗಳು, ಖಾಸಗಿ ಆಸ್ಪತ್ರೆಗಳು , ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಆಭರಣ ಅಂಗಡಿಗಳ ಮಾಲಿಕರ ಸಭೆಯನ್ನು ಕರೆದು ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.
ನಗರದಲ್ಲಿ ಯುವಕರಿಗೆ ಸಂಚಾರ ನಿಯಮ ಪಾಲನೆ ಬಗ್ಗೆ ಮೊದಲು ಅರಿವು ಮೂಡಿಸಬೇಕು. ಹಾಗಾಗಿ ಟ್ರಾಫಿಕ್ ವಾರ್ಡನ್ ಆಗಿ ಕೆಲಸ ನಿರ್ವಹಿಸಲು ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳು ಬಂದರೆ ಅವರಿಗೆ ತರಬೇತಿ ನೀಡಿ, ಅವರನ್ನು ಸಂಚಾರ ಪೊಲೀಸರ ಜತೆ ಸಹಾಯಕ್ಕಾಗಿ ಕಳುಹಿಸಲಾಗುವುದು.ಇದರಿಂದ ಜನರಿಗೂ ಸಂಚಾರ ನಿಯಮ ಪಾಲನೆ ತಿಳಿಸಿದಂತಾಗುತ್ತದೆ ಹಾಗೂ ಆ ಯುವಕರೂಸಂಚಾರ ನಿಯಮ ಪಾಲಿಸುತ್ತಾರೆ. ಆಸಕ್ತಿ ಇರುವ ಯುವಕರನ್ನು ಕಳುಹಿಸುವ ಜವಾಬ್ದಾರಿಯನ್ನು ಕಾಲೇಜುಗಳಿಗೆ ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಶೇಖರ್ ಎಚ್.ತೆಕ್ಕಣ್ಣನವರ ಸಲಹೆ ನೀಡಿದರು.
ಸಾರಿಗೆ ಇಲಾಖೆ ಜಂಟಿ ಆಯುಕ್ತ ಶಿವರಾಜ ಪಾಟೀಲ್,ಶಿವಮೊಗ್ಗ ನಗರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕ ಪ್ರಜ್ಞಾ ಪ್ರಕಾಶ್, ಗೋಪಾಲ್, ವಿ.ಎಸ್.ಎಲ್.ಕುಮಾರ್,ನಗರ ಸಾರಿಗೆ ಬಸ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ರುದ್ರೇಶ್, ಉದ್ಯಮಿ ವಾಸುದೇವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.