ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನೆರೆ ಹಾವಳಿ ಪೀಡಿತ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ಶಾಸಕ ಎಂ.ಬಿ.ಪಾಟೀಲ ಅವರು ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.
‘2004ರಲ್ಲಿ ಮುಳುಗಡೆ ಆದ ಈ ಗ್ರಾಮಗಳಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ, ಜನರು ಅಲ್ಲಿ ವಾಸಿಸದೇ, ಮುಳುಗಡೆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಮೊದಲೇ ಸ್ಥಳಾಂತರಗೊಂಡಿದ್ದರೆ ನಷ್ಟವಾಗುತ್ತಿರಲಿಲ್ಲ’ ಎಂದು ಉಪ ವಿಭಾಗಾಧಿಕಾರಿ ಸೋಮನಿಂಗ ಗೆಣ್ಣೂರ ಹೇಳಿದರು.
‘ಶಿರಬೂರ, ಕಣಬೂರ, ಚಿಕ್ಕಗಲಗಲಿ, ಜಂಬಗಿ (ಎಚ್), ಹೊಸೂರು ಮತ್ತು ಸುತಗುಂಡಿ ಗ್ರಾಮಗಳಲ್ಲಿ ಸಂಚರಿಸಿ, ಸಂತ್ರಸ್ತರ ನೋವು ಆಲಿಸಿ, ಆಹಾರ, ವಸತಿ ವ್ಯವಸ್ಥೆ ಹಾಗೂ ಅಗತ್ಯ ವಸ್ತುಗಳ ಕೊರತೆಯಾಗದಂತೆ ಆಯಾ ತಾಲ್ಲೂಕಿನ ತಹಶೀಲ್ದಾರರು ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ಬಿಎಲ್ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡವು ಬಬಲಾದ ಗ್ರಾಮದ ಜನರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಇಲ್ಲಿಗೆ ಭೇಟಿ ನೀಡಿದ ಎಂ.ಬಿ.ಪಾಟೀಲ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಬಬಲೇಶ್ವರ ತಹಶೀಲ್ದಾರ್ ಎಂ.ಎಸ್.ಅರಕೇರಿ, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ವಿ.ಎಸ್.ಪಾಟೀಲ, ರೈತ ಮುಖಂಡರಾದ ಎಚ್.ಎಸ್.ಕೋರಡ್ಡಿ, ಡಾ.ಕೆ.ಎಚ್.ಮುಂಬಾರೆಡ್ಡಿ, ವೆಂಕಣ್ಣ ಬಿದರಿ, ಅಪ್ಪುಗೌಡ ಪಾಟೀಲ, ಪ್ರಶಾಂತ ದೇಸಾಯಿ ಇದ್ದರು.