ಚನ್ನಪಟ್ಟಣ: ಸ್ವಾಮಿ ವಿವೇಕಾನಂದ ಅವರು ದೇಶದ ಪ್ರಗತಿಯನ್ನು ಯುವಶಕ್ತಿಯ ಮೂಲಕ ಕಟ್ಟಲು ಹೊರಟವರು ಎಂದು ಸಮಾಜಸೇವಕ ರಾಂಪುರ ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಕ್ಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಸ್ವಾಮಿ ವಿವೇಕಾನಂದರ 156ನೇ ಜಯಂತ್ಯುತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕ ಚಿಂತನೆ ಆಧ್ಯಾತ್ಮಿಕತೆಯೊಂದಿಗೆ ಜ್ಞಾನಗಳಿಸಿ ದೇಶವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು. ಅವರ ಆದರ್ಶಗಳನ್ನು ಇಂದಿನ ಯುವ ಸಮೂಹ ರೂಢಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಕನ್ನಡ ಶಿಕ್ಷಕ ಯೋಗೀಶ್ ಚಕ್ಕೆರೆ ಮಾತನಾಡಿ, ವಿವೇಕಾನಂದರು ಈ ದೇಶದ ಸಾಮರ್ಥ್ಯವನ್ನು ಷಿಕಾಗೊ ನಗರದಲ್ಲಿ ಸಾಬೀತುಪಡಿಸಿ, ದೇಶಕ್ಕೆ ಕೀರ್ತಿ ತಂದವರು. ಸರ್ವಧರ್ಮಗಳನ್ನು ಪ್ರೀತಿಸುವುದು ಹಿಂದೂಧರ್ಮದ ಮೂಲ ಆಶಯವಾಗಬೇಕು ಎಂದು ಅವರು ಹೇಳಿದ್ದರು ಎಂದರು.
ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ಸಿ. ವೀರೇಗೌಡ ಮಾತನಾಡಿದರು. ಶಾಲೆಯ ಪ್ರಾಂಶುಪಾಲ ವಿ.ಬಿ.ಹನುಮಂತಯ್ಯ, ಕಾಂಗ್ರೆಸ್ ಮುಖಂಡರಾದ ಎಸ್.ಸಿ.ಶೇಖರ್, ಬಿ.ಕಿರಣ್ ಕುಮಾರ್, ಮತ್ತೀಕೆರೆ ಕೃಷ್ಣಪ್ಪ ಭಾಗವಹಿಸಿದ್ದರು.
ಗಾಯಕರಾದ ಎಚ್.ಎಸ್.ಸರ್ವೋತ್ತಮ್, ಚಲ್ಲಯ್ಯ ಕೋಡಂಬಹಳ್ಳಿ, ಅವಿನಂ ಭೈರವ್, ಪ್ರಕಾಶ್ ಬಾಣಂತಹಳ್ಳಿ, ಡಾ. ಅಕ್ರಂಪಾಷ, ಚಕ್ಕೆರೆ ಸಿದ್ದರಾಜು ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯಕ ಡಾ. ಬಿ.ಆರ್.ಶಿವಕುಮಾರ್ ನಿರೂಪಿಸಿದರು. ಎಂ.ಆರ್. ಪ್ರಮೋದ್ ಸ್ವಾಗತಿಸಿದರು. ಗಂಗಾಧರ್ ವಂದಿಸಿದರು.