ಮೈಸೂರು: ‘ನನ್ನ ಐದನೇ ತಲೆಮಾರಿನ ಅಜ್ಜನನ್ನು ಬಲಾತ್ಕಾರದಿಂದ ಮತಾಂತರ ಮಾಡಿದವ ಟಿಪ್ಪು ಸುಲ್ತಾನ್. ನಾನು ಆತನನ್ನು ಹೇಗೆ ಗೌರವಿಸಲಿ, ಹೇಗೆ ಅವನ ಜಯಂತಿ ಆಚರಿಸಲಿ’ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಶನಿವಾರ ಪ್ರಶ್ನಿಸಿದರು.
ಸಾಧ್ವಿ ಪತ್ರಿಕೆ ಅಂತರ್ಜಾಲ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಂಗಾಯಣದ ನಿರ್ದೇಶಕನಾಗಿ ಮೈಸೂರಿಗೆ ಬಂದ ಆರಂಭದಲ್ಲಿ ಬಹಳ ಮಂದಿಗೆ ಟಿಪ್ಪು ಬಗ್ಗೆ ಬಹಳ ಹೆಮ್ಮೆ ಇರುವುದು ತಿಳಿಯಿತು. ಅವರನ್ನು ಕಂಡಾಗ ನನಗೆ ಥೂ... ಎನಿಸಿಬಿಡುತಿತ್ತು’ ಎಂದು ಹರಿಹಾಯ್ದರು.
ಸಿಎಎ ವಿರುದ್ಧ ಹೋರಾಡುವವರಿಗೆ ಸಂವಿಧಾನದ ಬಗ್ಗೆ ಅಲ್ಪ ಜ್ಞಾನವೂ ಇಲ್ಲ. ಪಾಠ, ನಾಟಕದ ಮೂಲಕ ಅವರಿಗೆ ಸಂವಿಧಾನ ತಿಳಿಸಿಕೊಡಿ ಎಂದು ಕೇಂದ್ರ ಸರ್ಕಾರ ರಂಗಾಯಣಕ್ಕೆ ₹ 15 ಲಕ್ಷ ಕೊಟ್ಟಿದೆ ಎಂದರು.
ಕೆಲವರು ಅಂಬೇಡ್ಕರ್, ಗಾಂಧಿ, ಬುದ್ಧ ಅವರನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಹಾಗೆ ಮಾಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಅಂಬೇಡ್ಕರ್, ಗಾಂಧಿ ಯಾರಪ್ಪನ ಸೊತ್ತು? ಎಂದು ಕಿಡಿಕಾರಿದರು.