ಮೈಸೂರು: ಒತ್ತುವರಿ ಮಾಡಿಕೊಂಡಿದ್ದ ₹ 10 ಕೋಟಿ ಮೌಲ್ಯದ ತನ್ನ ಒಡೆತನದ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಅತಿಕ್ರಮಣದಾರರಿಂದ ಮರು ವಶಕ್ಕೆ ಪಡೆದಿದೆ.
ಹಂಚ್ಯಾ ಗ್ರಾಮದ ಸರ್ವೆ ನಂಬರ್ 275ರಲ್ಲಿ 8.27 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದ ಮುಡಾ, ವಿವಿಧ ಯೋಜನೆಗೆ ಬಳಸಲು ನಿಗದಿ ಮಾಡಿತ್ತು.
ಈ ಭೂಮಿಯಲ್ಲಿ ₹ 6 ಕೋಟಿಗೂ ಹೆಚ್ಚು ಮೌಲ್ಯದ ಪ್ರದೇಶ ಅನಧಿಕೃತವಾಗಿ ಒತ್ತುವರಿ ಆಗಿರುವುದನ್ನು ಗುರುತಿಸಿದ ಪ್ರಾಧಿಕಾರ, ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ, ತನ್ನ ವಶಕ್ಕೆ ಪಡೆದಿದೆ.
ಪ್ರಾಧಿಕಾರದ ಸೂಪರಿಟೆಂಡಿಂಗ್ ಎಂಜಿನಿಯರ್ ಶಂಕರ್, ಕಾರ್ಯ ನಿರ್ವಾಹಕ ಎಂಜಿನಿಯರ್ ಸತೀಶ್ ಸಮ್ಮುಖದಲ್ಲಿ ವಲಯ ಕಚೇರಿಯ ಎಂಜಿನಿಯರ್ಗಳು ಒತ್ತುವರಿಯಾಗಿದ್ದ ಸ್ವತ್ತನ್ನು ವಶಕ್ಕೆ ಪಡೆದು, ಪ್ರಾಧಿಕಾರದ ಆಸ್ತಿ ಎಂದು ನಾಮಫಲಕ ಅಳವಡಿಸಿದ್ದಾರೆ.
ಲಲಿತಾದ್ರಿಪುರ ಗ್ರಾಮದ ಸರ್ವೆ ನಂಬರ್ 28ರಲ್ಲೂ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿರುವುದನ್ನು ತೆರವುಗೊಳಿಸಲಾಗಿದೆ. ₹ 4 ಕೋಟಿ ಮೌಲ್ಯದ 2 ಎಕರೆ ಭೂಮಿಯನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗಿದೆ.
ಈ ಎರಡೂ ಪ್ರಕರಣದಿಂದ ₹ 10 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.