ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಾಯ್ದೆಗೆ ತರಬೇಕಾದ ತಿದ್ದುಪಡಿಗಳು ಮತ್ತು ರಿಟರ್ನ್ ಅರ್ಜಿ ನಮೂನೆಗಳನ್ನು ಸರಳಗೊಳಿಸುವ ಸಂಬಂಧ ಮೇ 4ರಂದು ಜಿಎಸ್ಟಿ ಮಂಡಳಿ ಸಭೆ ನಡೆಯಲಿದೆ.
ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡಿರುವ ಮಂಡಳಿಯ 27ನೆ ಸಭೆಯು ವಿಡಿಯೊ ಕಾನ್ಫೆರನ್ಸ್ ಮೂಲಕ ನಡೆಯಲಿದೆ. ಮಂಡಳಿಯ ಅಧ್ಯಕ್ಷರಾಗಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಜಿಎಸ್ಟಿಯ ಬೆನ್ನೆಲುಬು ಆಗಿರುವ ಜಿಎಸ್ಟಿಎನ್ ಅನ್ನು ಸರ್ಕಾರಿ ಸಂಸ್ಥೆಯನ್ನಾಗಿ ಪರಿವರ್ತಿಸುವ ಸಾಧ್ಯತೆಯ ಕುರಿತೂ ಈ ಸಭೆಯಲ್ಲಿ ಚರ್ಚಿಸಲಾಗುವುದು. ಈ ಸಂಬಂಧ ಜೇಟ್ಲಿ ಅವರು ಹಣಕಾಸು ಕಾರ್ಯದರ್ಶಿ ಹಸ್ಮುಖ ಆಧಿಯಾ ಅವರಿಗೆ ಕೇಳಿಕೊಂಡಿದ್ದರು.
ಸದ್ಯಕ್ಕೆ ಐದು ಖಾಸಗಿ ಹಣಕಾಸು ಸಂಸ್ಥೆಗಳು, ಜಿಎಸ್ಟಿಎನ್ನಲ್ಲಿ ಶೇ 51ರಷ್ಟು ಪಾಲು ಬಂಡವಾಳ ಹೊಂದಿವೆ. ಉಳಿದ ಶೇ 49ರಷ್ಟು ಪಾಲು ಬಂಡವಾಳವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಂಡಿವೆ.
ರಿಟರ್ನ್ ಸಲ್ಲಿಕೆ ಸಂಬಂಧ ಸುಶೀಲ್ ಕುಮಾರ್ ಮೋದಿ ನೇತೃತ್ವದಲ್ಲಿನ ಸಮಿತಿಯು ಮುಂದಿಟ್ಟಿರುವ ಮೂರು ಪ್ರಸ್ತಾವಗಳನ್ನು ಸಭೆ ವಿವರವಾಗಿ ಚರ್ಚಿಸಲಿದೆ.