ಮೈಸೂರು: ನಗರದಲ್ಲಿ ಕಳೆದ ವರ್ಷ (2020) ಸಂಭವಿಸಿದ್ದ ಅಪಘಾತಗಳಲ್ಲಿ 53 ಮಂದಿ ಹೆಲ್ಮೆಟ್ ಧರಿಸಿದ್ದರೆ ಬದುಕಿರುತ್ತಿದ್ದರು ಎಂಬ ಅಂಶ ಪೊಲೀಸ್ ಇಲಾಖೆಯ ಅಂಕಿ–ಅಂಶಗಳ ವಿಶ್ಲೇಷಣೆಯಿಂದ ಗೊತ್ತಾಗಿದೆ. ಅಪಘಾತಗಳಲ್ಲಿ ಮೃತಪಟ್ಟ ಒಟ್ಟು 100ಕ್ಕೂ ಮಂದಿಯ ಪೈಕಿ 53 ಮಂದಿ ಹೆಲ್ಮೆಟ್ ಧರಿಸದೇ ಇದ್ದ ಕಾರಣದಿಂದಲೇ ಮೃತಪಟ್ಟಿದ್ದಾರೆ.
ಹೆಲ್ಮೆಟ್ ರಹಿತ ಚಾಲನೆಗೆ ಪೊಲೀಸರು ನಿರಂತರವಾಗಿ ದಂಡ ವಸೂಲು ಮಾಡುತ್ತಿದ್ದರೂ, ಜನರಲ್ಲಿ ಹೆಲ್ಮೆಟ್ನ ಮಹತ್ವದ ಅರಿವು ಉಂಟಾಗಿಲ್ಲ. ಅತ್ಯಂತ ಹೆಚ್ಚು ಸಾವು ನಗರದ ಕೆ.ಆರ್.ಸಂಚಾರ ಠಾಣಾ ವ್ಯಾಪ್ತಿಯಲ್ಲೇ ಸಂಭವಿಸಿದೆ.
2019ರಲ್ಲಿ ನಗರದಲ್ಲಿ ಸಂಭವಿಸಿದ್ದ ಅಪಘಾತಗಳಲ್ಲಿ 51 ಮಂದಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಮೃತಪಟ್ಟಿದ್ದರು. ಈ ಬಾರಿ ಇದರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. 2018ರಲ್ಲಿ ಹೆಲ್ಮೆಟ್ ಹಾಕದೇ 55 ಮಂದಿ ಸಾವಿಗೀಡಾಗಿದ್ದರು. ಒಂದು ವೇಳೆ ಲಾಕ್ಡೌನ್ ಇರದೇ ಹೋಗಿದ್ದರೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿದ್ದವು.
ಹೆಲ್ಮೆಟ್ ಹಾಕುವುದು ಪೊಲೀಸರಿಗಾಗಿ!: ಹೆಲ್ಮೆಟ್ ಧರಿಸುವುದು ಪೊಲೀಸರಿಗಾಗಿಯೇ ಹೊರತು ತಮ್ಮ ಪ್ರಾಣ ರಕ್ಷಣೆಗೆ ಅಲ್ಲ ಎಂದೇ ಬಹುತೇಕ ಮಂದಿ ಹೇಳುತ್ತಾರೆ. ಹೆಲ್ಮೆಟ್ ಇದ್ದರೂ ಅದನ್ನು ದ್ವಿಚಕ್ರ ವಾಹನದ ಮುಂದೆ ಇಟ್ಟುಕೊಂಡು ವಾಹನ ಚಾಲನೆ ಮಾಡುತ್ತಾರೆ. ಮುಂದೆ ಪೊಲೀಸರು ಕಂಡ ಕೂಡಲೇ ಹೆಲ್ಮೆಟ್ ಅನ್ನು ತಲೆಗೆ ಹಾಕಿಕೊಳ್ಳುತ್ತಾರೆ. ಪೊಲೀಸರ ತಪಾಸಣೆ ಮುಗಿದು ಮುಂದೆ ಸಾಗಿದ ಬಳಿಕ ಯಥಾಪ್ರಕಾರ ಹೆಲ್ಮೆಟ್ ತೆಗೆದು ಬಿಡುತ್ತಾರೆ.
ಪೊಲೀಸರೂ ಯಾಂತ್ರಿಕವಾಗಿಯೇ ದಂಡ ಹಾಕುತ್ತಾರೆ. ಹೆಲ್ಮೆಟ್ ಇಲ್ಲದೇ ಚಾಲನೆ ಮಾಡುವವರನ್ನು ಕಳ್ಳರಂತೆ ಹಿಡಿಯುತ್ತಾರೆ. ಹೆಲ್ಮೆಟ್ನ ಮಹತ್ವದ ಕುರಿತು ಅವರಿಗೆ ಅರಿವು ಮೂಡಿಸು ವುದಿಲ್ಲ. ಹಣ, ದಂಡ, ರಸೀದಿ... ಇಷ್ಟಕ್ಕೆ ವಾಹನ ತಪಾಸಣೆ ಸೀಮಿತವಾಗಿದೆ.