ಬೆಟ್ಟದಪುರ: ಪಿರಿಯಾಪಟ್ಟಣ ಮುಖ್ಯರಸ್ತೆಯ ಬಾರಸೆ ಗೇಟಿನ ಈಚೂರು ದೊಡ್ಡ ಕೆರೆ ಬಳಿ ಗುರುವಾರ ಕಾರು ಮತ್ತು ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭುವನಹಳ್ಳಿ ಗ್ರಾಮದ ಬೈಕ್ ಸವಾರ ಮಂಜುನಾಥ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಜುನಾಥ್ ಅವರು ಕೆಲಸದ ನಿಮಿತ್ತ ಪಿರಿಯಾಪಟ್ಟಣಕ್ಕೆ ತೆರಳುವಾಗ ಪಿರಿಯಾಪಟ್ಟಣ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಇದ್ದ ಮತ್ತೊಂದು ಬೈಕಿಗೆ ಜೋರಾಗಿ ಅಪ್ಪಳಿಸಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಸ್ಥಳದಲ್ಲಿ ಕಾರನ್ನು ನಿಲ್ಲಿಸದೇ ನಂದಿಪುರ ಗ್ರಾಮದ ಬಳಿ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಕಾರು ಮತ್ತು ಬೈಕ್ಗಳನ್ನು ವಶಪಡಿಸಿಕೊಂಡು ಚಾಲಕನ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.