ಹುಣಸೂರು: ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಬಳಿ ಗುರುವಾರ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳಾ ಕಾನ್ಸ್ಟೆಬಲ್ ಸೇರಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಕೊಡಗು ಜಿಲ್ಲೆಯ ಸಿದ್ದಾಪುರ ಠಾಣೆ ಕಾನ್ಸ್ಟೆಬಲ್, ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ಶಾಂತಮ್ಮ (26) ಹಾಗೂ ಅದೇ ಗ್ರಾಮದ ನಟೇಶನಾಯ್ಕ ಮೃತರು. ಶಾಂತಮ್ಮ ಅವರ ಸಹೋದರ ಪರಮೇಶ್ ಹಾಗೂ ಕಾನ್ಸ್ಟೆಬಲ್ ಗೌರಮ್ಮ ಗಾಯಗೊಂಡವರು.
ಮಡಿಕೇರಿಯ ದಸರಾ ಮಹೋತ್ಸವದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಾಂತಮ್ಮ ಹಾಗೂ ಗೌರಮ್ಮ ಅವರು ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಹೋಗುತ್ತಿದ್ದರು. ಹುಣಸೂರಿನ ಬಸ್ ನಿಲ್ದಾಣಕ್ಕೆ ಬಂದಿದ್ದ ಶಾಂತಮ್ಮ ಹಾಗೂ ಗೌರಮ್ಮ ಅವರನ್ನು ಪರಮೇಶ್ ಬೈಕ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಕಟ್ಟೆಮಳಲವಾಡಿ ಗ್ರಾಮದ ನಟೇಶನಾಯ್ಕ ಹುಣಸೂರು ಕಡೆಗೆ ಹೋಗುತ್ತಿದ್ದರು. ರಾತ್ರಿ 10ರ ಸುಮಾರಿಗೆ ಕಟ್ಟೆಮಳಲವಾಡಿ ಬಳಿ ಕರ್ನಾಟಕ ಉಲ್ಲನ್ಸ್ ಕಾರ್ಖಾನೆ ಸಮೀಪ ಅಪಘಾತ ಸಂಭವಿಸಿದೆ. ಶಾಂತಮ್ಮ ಹಾಗೂ ನಟೇಶನಾಯ್ಕ ಅವರ ತಲೆಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೌರಮ್ಮ ಹಾಗೂ ಪರಮೇಶ್ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದಾಪುರ ಠಾಣೆಯ ಪೊಲೀಸ್ ಸಿಬ್ಬಂದಿ ಶಾಂತಮ್ಮ ಅವರ ಅಂತಿಮ ದರ್ಶನ ಪಡೆದರು. ಕಟ್ಟೆಮಳಲವಾಡಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಸಿ.ಪೂವಯ್ಯ ಅವರರ ನೇತೃತ್ವದಲ್ಲಿ ಸಿಬ್ಬಂದಿ ಕುಶಲತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು.
ಮನೆಯಲ್ಲಿ ‘ಪಕ್ಷದ ಹಬ್ಬ’ ನಡೆಯುತ್ತಿತ್ತು. ಇದಕ್ಕೆ ರಜೆ ಹಾಕಿ ಬರುವಂತೆ ತಿಳಿಸಿದ್ದೆವು. ಆದರೆ, ರಜೆ ಸಿಕ್ಕಿಲ್ಲ. ಕೆಲಸ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಳು. ಆದರೆ, ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ ಎಂದು ಕುಟುಂಬದ ಸದಸ್ಯರು ಕಣ್ಣೀರಿಟ್ಟರು.