ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನ ಮೈಸೂರು ಮಾನಂದವಾಡಿ ಮುಖ್ಯರಸ್ತೆಯ ಸೋಗಹಳ್ಳಿ ಗೇಟ್ ಸಮೀಪ ಮಂಗಳವಾರ ಕಾರು ಪಲ್ಟಿ ಹೊಡೆದದ್ದರಿಂದ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಮೈಸೂರು ಕಡೆಯಿಂದ ಕೇರಳಕ್ಕೆ ತೆರಳುತ್ತಿತ್ತು. ಅದರಲ್ಲಿದ್ದ ರುಪೈದ್ (21) ಸಾವನ್ನಪ್ಪಿದ್ದು, ಶಾಮಿಲ್, ಮುಸ್ತಾಕ್ ಹಾಗೂ ಸುಹೇಲ್ ಈ ಮೂವರಿಗೆ ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಇವರು ಮೂಲತಃ ಕೇರಳದ ಕಣ್ಣೂರು ಜಿಲ್ಲೆಯವರಾಗಿದ್ದು ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು 7 ಯುವಕರು ಮೈಸೂರು ವೀಕ್ಷಣೆ ಮಾಡಲು ಬಂದಿದ್ದು ಮಂಗಳವಾರ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಎಸ್ಐ ರಾಮಚಂದ್ರ ನಾಯಕ, ಸಿಬ್ಬಂದಿ ನಾಗೇಗೌಡ, ವಿಶ್ವನಾಥ, ನಿಂಗರಾಜು, ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.