ಹುಣಸೂರು: ತಾಲ್ಲೂಕಿನ ಜಾಬಗೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಲಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಕೇಂದ್ರದಲ್ಲಿಯೇ ಬಿಟ್ಟು ಸಿಬ್ಬಂದಿಯು ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ನಿದ್ದೆಯಿಂದ ಎದ್ದ ಬಾಲಕಿ ಅಳುತ್ತಿರುವುದನ್ನು ಕೇಳಿದ ಗ್ರಾಮಸ್ಥರು ಬೀಗ ಒಡೆದು ಆಕೆಯನ್ನು ರಕ್ಷಿಸಿದ್ದಾರೆ.
ಅಂಗನವಾಡಿ ಕೇಂದ್ರದ ಸಿಬ್ಬಂದಿ ಕೋಮಲಾ ಬಾಯಿ ಕರ್ತವ್ಯದ ನಿಮಿತ್ತ ಕಟ್ಟೆಮಳಲವಾಡಿಗೆ ತೆರಳಿದ್ದರು. ಅಂಗನವಾಡಿ ಸಹಾಯಕಿ ಮಮತಾ ಅವರು ಮಧ್ಯಾಹ್ನ 3ಕ್ಕೆ ಮಕ್ಕಳನ್ನು ಕಳುಹಿಸಿ ಮನೆಗೆ ತೆರಳುವ ಆತುರದಲ್ಲಿದ್ದರು. ಈ ವೇಳೆ, ಬಾಲಕಿ ಅಮೂಲ್ಯಾ ಮಲಗಿರುವುದನ್ನು ಗಮನಿಸಿರಲಿಲ್ಲ.
ಮಗಳು ಮನೆಗೆ ಬಾರದಿರುವುದನ್ನು ಗಮನಿಸಿದ ಪೋಷಕರಾದ ಗಿರೀಶ್ ಮತ್ತು ಲಕ್ಷ್ಮಿ ಹುಡುಕಾಟ ನಡೆಸಿದ್ದಾರೆ. ಆದರೆ, ಸುಳಿವು ಸಿಕ್ಕಿರಲಿಲ್ಲ.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಶೋಭಾ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ, ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.