ಎಚ್.ಡಿ.ಕೋಟೆ: ತಾಲ್ಲೂಕಿನ ಅಂತರಸಂತೆ, ನೂರಲಕುಪ್ಪೆ ಬಿ ಗ್ರಾಮದ ಬಳಿ ಹುಲಿ ಮತ್ತೆ ಪ್ರತ್ಯಕ್ಷಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಕೂಂಬಿಂಗ್ ಆರಂಭಿಸಿದ್ದಾರೆ.
ಅಂತರಸಂತೆಯ ಶರತ್ ಹಾಗೂ ಲಕ್ಷ್ಮಣ್ ಹುಲಿ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ವಲಯ ಅರಣ್ಯ ಅಧಿಕಾರಿ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಇಲಾಖೆಯ ಸಿಬ್ಬಂದಿಗೆ ಗೋವಿಂದರಾಜು ಎಂಬುವರ ಜಮೀನಿನ ಸುತ್ತಮುತ್ತ ಗಸ್ತು ತಿರುಗಲು ಸೂಚಿಸಲಾಗಿದೆ. ಜಮೀನಿನ ಸುತ್ತಮುತ್ತ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಸಿದ್ದರಾಜು ತಿಳಿಸಿದರು.
ಒಂದು ವಾರದ ಹಿಂದೆ ಅಂತರಸಂತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ಜಾನುವಾರುಗಳನ್ನು ಕೊಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಮೂಲಕ ಒಂದು ವಾರ ಕಾರ್ಯಾಚರಣೆ ನಡೆಸಿದ್ದರೂ ಹುಲಿ ಪತ್ತೆಯಾಗಿರಲಿಲ್ಲ.