ಮೈಸೂರು: ಕಿಸೆಗಳ್ಳತನ ನಡೆದ 24 ಗಂಟೆಯ ಒಳಗೆ ಇಬ್ಬರು ಕಳ್ಳರನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು ಅವರಿಂದ ₹ 1.20 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ರಾಜೀವ್ ನಗರದ ಅಸ್ಗರ್ ಅಹಮ್ಮದ್ (40) ಹಾಗೂ ಗೌಸಿಯಾನಗರದ ಅಕ್ರಂಖಾನ್ (42) ಬಂಧಿತ ಆರೋಪಿಗಳು.
ಇವರು ಜುಲೈ 6ರಂದು ಅಶೋಕರಸ್ತೆಯಲ್ಲಿರುವ ಕೋತಾಸ್ ಕಾಫಿಯಲ್ಲಿ ಮರೀಗೌಡ ಎಂಬುವವರು ಕಾಫಿ ಕುಡಿಯುತ್ತಿದ್ದಾಗ ಪ್ಯಾಂಟಿನ ಜೇಬಿನಿಂದ ಆರೋಪಿಗಳು ₹ 2 ಲಕ್ಷ ಹಣವನ್ನು ಲಪಟಾಯಿಸಿದ್ದರು.
ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಇನ್ಸ್ಪೆಕ್ಟರ್ ಮುನಿಯಪ್ಪ ಹಳೆಯ ಕಳ್ಳ ಅಕ್ರಂ ಚಹರೆಯನ್ನು ಹೋಲುವಂತಹ ವ್ಯಕ್ತಿಯನ್ನು ಪತ್ತೆ ಹಚ್ಚಿದರು. ನಂತರ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಯಿತು.
‘ಹೆಚ್ಚು ಹಣವನ್ನು ಸಾಗಣೆ ಮಾಡಬಾರದು. ಡಿಜಿಟಲ್ ಅಥವಾ ಬ್ಯಾಂಕಿನ ಮೂಲಕ ಹಣ ವರ್ಗಾವಣೆ ಮಾಡಬೇಕು. ಒಂದು ವೇಳೆ ಹಣ ತರಬೇಕಾದರೆ ಒಂದೇ ಜೇಬಿನಲ್ಲಿ ಹೆಚ್ಚು ಹಣವನ್ನು ಹಾಕಿಕೊಂಡು ಬರಬಾರದು’ ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.
ದೇವರಾಜ ವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್.ಮುನಿಯಪ್ಪ, ಪಿಎಸ್ಐ ಪೂಜಾ, ಸಿಬ್ಬಂದಿಯಾದ ಪರಶಿವಮೂರ್ತಿ, ಲೋಕೇಶ, ಎಚ್.ಸಿ.ಮಹದೇವಸ್ವಾಮಿ, ಆದಂ ಪ್ರದೀಪ್, ಪ್ರತೀಪ ಕಾರ್ಯಾಚರಣೆ ತಂಡದಲ್ಲಿದ್ದರು.
ಅಕ್ರಮ ಸೀಮೆಎಣ್ಣೆ ದಾಸ್ತಾನು; ವ್ಯಕ್ತಿ ಬಂಧನ
ಮೈಸೂರು: ಸುಮಾರು 675 ಲೀಟರ್ನಷ್ಟು ಸೀಮೆಎಣ್ಣೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಎ.ಜಿ.ಬ್ಲಾಕ್ನ ಸೀಮೆಎಣ್ಣೆ ಕಾಲನಿ ನಿವಾಸಿ ನೂರುದ್ದೀನ್ (50) ಎಂಬ ಆರೋಪಿಯನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.