ನವದೆಹಲಿ: ದೇಶದಲ್ಲಿನ ಜೈಲುಗಳ ಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರಿಂ ಕೋರ್ಟ್, ಕೈದಿಗಳಿಗೂ ಸಹ ಮಾನವ ಹಕ್ಕುಗಳು ಅನ್ವಯವಾಗುತ್ತವೆ ಎಂದು ತಿಳಿಸಿದೆ.
‘ದೇಶದಲ್ಲಿನ ಜೈಲುಗಳು ಕೈದಿಗಳ ದಟ್ಟಣೆಯಿಂದ ಕೂಡಿರುವುದು ದುರದೃಷ್ಟಕರ. ಆದರೆ, ಯಾವುದೇ ಕಾರಣಕ್ಕೂ ಕೈದಿಗಳನ್ನು ಪ್ರಾಣಿಗಳಂತೆ ಕೂಡಿ ಹಾಕಬಾರದು’ ಎಂದು ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠವು ತಿಳಿಸಿದೆ.
‘ಕೈದಿಗಳಿಗೆ ಜಾಮೀನು ದೊರೆತರೂ ಭದ್ರತೆಯನ್ನು ಒದಗಿಸದ ಕಾರಣ ಬಿಡುಗಡೆಯಾಗಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರು ಸಣ್ಣ–ಪುಟ್ಟ ಅಪರಾಧಕ್ಕೂ ಜೈಲಿನಲ್ಲಿದ್ದಾರೆ. ಅವರಿಗೂ ಸಹ ಜಾಮೀನು ದೊರೆಯಬೇಕಾಗಿತ್ತು. ಜೈಲಿನಲ್ಲಿ ಕೈದಿಗಳನ್ನು ಸಮರ್ಪಕವಾಗಿ ಇರಿಸಲು ಸಾಧ್ಯವಾಗದಿದ್ದರೆ ಬಿಡುಗಡೆ ಮಾಡಿ’ ಎಂದು ತಿಳಿಸಿತು.
ದೇಶದಲ್ಲಿನ 1,382 ಜೈಲುಗಳಲ್ಲಿನ ಅಮಾನವೀಯ ಸ್ಥಿತಿ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.