ಮೈಸೂರು: ಆನೆದಂತಗಳ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಮೈಸೂರಿನ ಮನೋಹರ್ (45), ಸೋಮವಾರಪೇಟೆಯ ಶಿವದಾಸ್ (55) ಹಾಗೂ ಸುಮಂತ್ (26) ಬಂಧಿತರು. ಇವರಿಂದ ಆನೆದಂತದಲ್ಲಿ ಕೆತ್ತಿದ ಮೂರು ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಇಲ್ಲಿನ ನಾಯ್ಡುನಗರದಲ್ಲಿ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಡಿಸಿಎಫ್ ಪೂವಯ್ಯ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ.
ಮಣ್ಣು ಮುಕ್ಕ ಹಾವು ವಶ; ನಾಲ್ವರ ಬಂಧನ
ಇಲ್ಲಿನ ಶ್ರೀರಾಂಪುರದ ಸಮೀಪ ಮಣ್ಣುಮುಕ್ಕ ಹಾವ (ಎರಡು ತಲೆ ಹಾವು)ನ್ನು ಬ್ಯಾಗಿನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ನಂಜನಗೂಡಿನ ಚಂದ್ರು (38), ಮಳವಳ್ಳಿಯ ಕುಮಾರ್ (32), ಚಾಮರಾಜನಗರದ ಕೊತ್ತಲವಾಡಿಯ ಶಿವಪ್ರಕಾಶ್ (32) ಹಾಗೂ ಬೆಂಗಳೂರಿನ ರವೀಶ್ (42) ಅವರನ್ನು ಬುಧವಾರ ಬಂಧಿಸಲಾಗಿದೆ. ಇವರಿಂದ ಮಣ್ಣುಮುಕ್ಕ ಹಾವನ್ನು ವಶಕ್ಕೆ ಪಡೆಯಲಾಗಿದೆ. ಈ ಹಾವನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಇವರು ಜನರನ್ನು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಅರಣ್ಯ ಸಂಚಾರ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸಿಎಫ್ ಪೂವಯ್ಯ, ಆರ್ಎಫ್ಒ ವಿವೇಕ್, ಸಿಬ್ಬಂದಿ ಸುಂದರ್, ವಿನೋದ್, ಪ್ರಮೋದ್, ಲಕ್ಷ್ಮೀಶ, ನಾಗರಾಜ್, ಸ್ನೇಹಾ, ಮೇಘನಾ, ಚನ್ನಬಸವ, ಮಹಂತೇಶ್, ಶರಣಪ್ಪ, ಗೋವಿಂದು, ರವಿಕುಮಾರ್, ರವಿನಂದನ್, ವಿರೂಪಾಕ್ಷ, ಪುಟ್ಟಸ್ವಾಮಿ ಮತ್ತು ಮಧು ಕಾರ್ಯಾಚರಣೆ ತಂಡದಲ್ಲಿದ್ದರು.