ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜನರಿಗೆ ಸಿಎಂ ನಿರಾಶೆ ಮೂಡಿಸಿರುವುದು ಸತ್ಯ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

Last Updated 5 ಜುಲೈ 2021, 7:54 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಜನರಿಗೆ ನಿರಾಶೆ ಮೂಡಿಸಿರುವುದು ಸತ್ಯ. ಇದಕ್ಕೆ ಅವರ ಆರೋಗ್ಯ ಕ್ಷೀಣಿಸಿರುವುದು ಕಾರಣ ಇರಬಹುದು. ಇನ್ನು ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಮೈಸೂರಿನಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಶಾಲಿ ಮಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನ ಇದೆ. ಅದರಲ್ಲಿ ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ರಾಜಕೀಯವಾಗಿ ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಮುಂದೆ ಅವಕಾಶ ಸಿಗುತ್ತದೆ ಆಗ ಒಳ್ಳೆಯ ಕೆಲಸ ಮಾಡಲಿ ಎಂದು ಹೇಳಿದರು.

ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿಗೆ ಸಂಬಂಧಿಸಿದ ಮಾತನಾಡಿದ ಸ್ವಾಮೀಜಿ, ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಬೇಕು. ಇಲ್ಲವಾದರೆ ಮತ್ತೆ ಹೋರಾಟ ಅನಿವಾರ್ಯ. ಈ ಬಾರಿಯೂ ಅರಮನೆ ಮೈದಾನದಲ್ಲೇ ಹೋರಾಟ 20 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಒಂದು ಬಾರಿ ನಮ್ಮ ಹೋರಾಟ ನಿರ್ಲಕ್ಷ್ಯ ಮಾಡಿ ಬಿಜೆಪಿ ನಷ್ಟ ಅನುಭವಿಸಿದೆ. ಎರಡು ಉಪ ಚುನಾವಣೆಯಲ್ಲೂ ಕೈ ಸುಟ್ಟುಕೊಂಡಿದೆ. ಮತ್ತೆ ಈ ತಪ್ಪು ಮಾಡಬೇಡಿ. ಯತ್ನಾಳರಂತಹ ನಾಯಕರು ವಿಧಾನಸಭೆಯಲ್ಲಿ ಇದ್ದಿದ್ದಕ್ಕೆ ನಮ್ಮ ಪರ ಧ್ವನಿ ಆಯ್ತು. ಇದೇ ಕಾರಣಕ್ಕೆ ಸದನದಲ್ಲೂ ಅದು ರೆಕಾರ್ಡ್ ಆಯ್ತು. ಯಡಿಯೂರಪ್ಪ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ಅವರ ಅವಧಿಯಲ್ಲೇ ನಮಗೆ ಮೀಸಲಾತಿ ಸಿಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡುವುದಾದರೆ ಲಿಂಗಾಯತ ಸಮುದಾಯದ ಉತ್ತರ ಕರ್ನಾಟಕದ ಭಾಗದವರಿಗೆ ನೀಡಬೇಕು ಎಂದು ಬಯಸಿದ್ದಾರೆ.

ಲಿಂಗಾಯತ ಸಮುದಾಯದಲ್ಲಿ ಪರ್ಯಾಯ ನಾಯಕರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ನಾಯಕರು ಇಲ್ಲ ಎಂದು ಅವಮಾನ ಮಾಡಬೇಡಿ. ತುಂಬಾ ಜನ ಸಮರ್ಥ ಪರ್ಯಾಯ ನಾಯಕರಿದ್ದಾರೆ. ನಾಯಕರನ್ನು ಸೃಷ್ಟಿಸುವ ಶಕ್ತಿ ಮಠಗಳಿಗೆ ಇದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT